ADVERTISEMENT

ಕೋಟಿ ಸಸಿ ನೆಡುವ ಅಭಿಯಾನ

​ಪ್ರಜಾವಾಣಿ ವಾರ್ತೆ
Published 3 ಜೂನ್ 2019, 20:03 IST
Last Updated 3 ಜೂನ್ 2019, 20:03 IST

ಬೆಂಗಳೂರು: ಸಮರ್ಥ ಭಾರತ ಸಂಸ್ಥೆಯ ಆಶ್ರಯದಲ್ಲಿ ಒಂದು ಕೋಟಿ ಗಿಡಗಳನ್ನು ನೆಡುವ ಅಭಿಯಾನ ಜೂನ್‌ 5ರಿಂದ ಆಗಸ್ಟ್‌ 15ರ ವರೆಗೆ ನಡೆಯಲಿದೆ.

ರಾಷ್ಟ್ರೋತ್ಥಾನ ಪರಿಷತ್‌ನ ಮಾರ್ಗದರ್ಶಕ ಗಣಪತಿ ಹೆಗಡೆ ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಅಭಿಯಾನಕ್ಕೆ 600ಕ್ಕೂ ಹೆಚ್ಚು ಸಂಘಸಂಸ್ಥೆಗಳು ಕೈ ಜೋಡಿಸಿದ್ದು, ಅರಣ್ಯ ಮತ್ತು ತೋಟಗಾರಿಕೆ ಇಲಾಖೆಗಳು ಗಿಡಗಳನ್ನು ಒದಗಿಸಲಿದೆ. ತಾಲ್ಲೂಕು, ಹೋಬಳಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸರಕಾರಿ ಹಾಗೂ ಖಾಸಗಿ ಜಮೀನಿನಲ್ಲಿ ಗಿಡಗಳನ್ನು ನೆಡಲಾಗುತ್ತದೆ’ ಎಂದರು.

ಅನೇಕ ಸಂಘ ಸಂಸ್ಥೆಗಳು 30 ಲಕ್ಷಕ್ಕೂ ಅಧಿಕ ಸೀಡ್‌ ಬಾಲ್‌ಗಳನ್ನು (ಬೀಜದ ಉಂಡೆಗಳು) ತಯಾರಿಸಿವೆ. ಇದಕ್ಕೆ ಶಾಲಾ ಕಾಲೇಜುಗಳು, ಕಾರ್ಪೊರೇಟ್‌ ಕಂಪನಿಗಳು ಕೈಜೋಡಿಸಿವೆ ಎಂದರು.

ADVERTISEMENT

‘ಮಂಡ್ಯ ಜಿಲ್ಲೆಯಲ್ಲಿ 1 ಲಕ್ಷ ಸಸಿಗಳನ್ನು ನೆಡಲಾಗುವುದು. ಬೆಂಗಳೂರು ನಗರವನ್ನು 14 ವಿಭಾಗಗಳನ್ನಾಗಿ ವಿಂಗಡಿಸಿ, ಪ್ರತಿ ವಿಭಾಗದಲ್ಲಿ 500ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಪೋಷಿಸಲಾಗುವುದು. ಕೋಲಾರ ಜಿಲ್ಲೆಯ ಕೆಜಿಎಫ್‌ನಲ್ಲಿ 250 ಎಕರೆಯಲ್ಲಿ 10 ಸಾವಿರ ಸಸಿಗಳ ನೆಡುತ್ತೇವೆ’ ಎಂದರು.

ಗಿಡಗಳನ್ನು ಬೆಳೆಸುವ ಪ್ರಕ್ರಿಯೆಯಲ್ಲಿ ಸಾರ್ವಜನಿಕರ ಸಹಭಾಗಿತ್ವ ಮುಖ್ಯವಾಗಿದ್ದು, ನೆಟ್ಟ ಗಿಡಗಳಿಗೆ ಮೂರು ವರ್ಷ ನೀರು, ಗೊಬ್ಬರ ಹಾಕಿ ಸಂರಕ್ಷಣೆ ಮಾಡಬೇಕು ಎಂದು ಅವರು ಮನವಿ ಮಾಡಿದರು.

ಇದೇ 4ರಂದು ಬೆಳಿಗ್ಗೆ 10.30ಕ್ಕೆನಗರದ ಆರ್ ವಿ ಟೀಚರ್ಸ್ ಕಾಲೇಜಿನಲ್ಲಿ ಅಭಿಯಾನಕ್ಕೆಸಾವಯುವ ಕೃಷಿಕ ಆನಂದ ಚಾಲನೆ ನೀಡಲಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.