ಬೆಂಗಳೂರು: ದೇಶದಾದ್ಯಂತ ಸಾವಿರಾರು ಮಂದಿಯಿಂದ ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸಿ ವಂಚಿಸಿರುವ ಆರೋಪದಡಿ ‘ಕ್ಯೂನೆಟ್’ ಕಂಪನಿ ವಿರುದ್ಧ ತೆಲಂಗಾಣ ಹಾಗೂ ಕರ್ನಾಟಕದ ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಕಂಪನಿಯ ಪ್ರತಿನಿಧಿಗಳು ನಗರದಲ್ಲಿ ನಡೆಸುತ್ತಿದ್ದ ಸಭೆ ಮೇಲೆ ಪೊಲೀಸರು ಭಾನುವಾರ ದಾಳಿ ಮಾಡಿದರು.
‘ಕಂಪನಿ ವಿರುದ್ಧ ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ದೆಹಲಿಯಲ್ಲಿ 100ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕಂಪನಿ ಮುಖ್ಯಸ್ಥರು ತಲೆಮರೆಸಿಕೊಂಡು ಓಡಾಡುತ್ತಿದ್ದಾರೆ. ಅಷ್ಟಾದರೂ ಕೆಲ ಪ್ರತಿನಿಧಿಗಳು, ಏಜೆಂಟರ ಮೂಲಕ ಜನರನ್ನು ಸಂಪರ್ಕಿಸಿ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸುತ್ತಿದ್ದಾರೆ’ ಎಂದು ವಿಧಾನಸೌಧ ಪೊಲೀಸರು ಹೇಳಿದರು.
‘ಸಾಫ್ಟ್ವೇರ್ ಎಂಜಿನಿಯರ್ಗಳು ಸೇರಿ ಹಲವರಿಗೆ ಏಜೆಂಟರ ಮೂಲಕ ಕರೆಮಾಡಿಸಿದ್ದ ಪ್ರತಿನಿಧಿಗಳು, ಹಣ ಹೂಡಿಕೆಮಾಡಿದರೆ ಹೆಚ್ಚನ ಲಾಭಾಂಶ ನೀಡುವುದಾಗಿ ಹೇಳಿದ್ದರು. ಅವರೆಲ್ಲರಿಗೂ ಕಂಪನಿಬಗ್ಗೆ ಮಾಹಿತಿ ನೀಡಲೆಂದು ವಸಂತನಗರದ ಕ್ವೀನ್ಸ್ ರಸ್ತೆಯಲ್ಲಿರುವ ಪರ್ಲ್ ಬ್ಯಾಂಕ್ವೆಟ್ ಹಾಲ್ನಲ್ಲಿ ಭಾನುವಾರ ಸಭೆ ಏರ್ಪಡಿಸಿದ್ದರು’
‘ಸಭೆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಲಾಯಿತು. ಕಂಪನಿಯ ಪ್ರತಿನಿಧಿಗಳು ಅಲ್ಲಿಂದ ಪರಾರಿಯಾದರು. ಹೂಡಿಕೆದಾರರ ಹೇಳಿಕೆ ಪಡೆದು ಬುದ್ಧಿವಾದ ಹೇಳಿ ಕಳುಹಿಸಲಾಯಿತು’ ಎಂದು ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.