ಬೆಂಗಳೂರು: ಪ್ರಸಾದನ ಕಂಪನಿಯೊಂದರ ಹೆಸರಿನಲ್ಲಿ ಬಹುಮಾನದ ಆಮಿಷವೊಡ್ಡಿ ನಗರದ ವಿನುಶ್ರೀ ಎಂಬುವರಿಂದ ₹77 ಸಾವಿರ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ವಂಚನೆಗೀಡಾಗಿರುವ ಹೊಸಪಾಳ್ಯದ ವಿನುಶ್ರೀ ದೂರು ನೀಡಿದ್ದಾರೆ. ಆರೋಪಿ ರಾಕೇಶ್ ನಾಯ್ಕ ಎಂಬಾತನ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಜುಲೈ 21ರಂದು ವಿನುಶ್ರೀ ಅವರಿಗೆ ಕರೆ ಮಾಡಿದ್ದ ಆರೋಪಿ ರಾಕೇಶ್, ‘ನಾನು ಪ್ರಸಾದನ ಕಂಪನಿಯೊಂದರ ನೌಕರ. ಗ್ರಾಹಕರಿಗೆ ಪ್ರತಿ ವರ್ಷ ಬಹುಮಾನ ನೀಡಲಾಗುತ್ತಿದ್ದು, ಈ ವರ್ಷ ನಿಮಗೆ ಬಹುಮಾನ ಬಂದಿದೆ’ ಎಂದಿದ್ದ. ಪಾರ್ಸೆಲ್ ಮೂಲಕ ಮನೆಗೆ ಬಹುಮಾನ ಕಳುಹಿಸುವುದಾಗಿ ತಿಳಿಸಿದ್ದ.’
‘ಆಗಸ್ಟ್ 1ರಂದು ವಿನುಶ್ರೀ ಮನೆಗೆ ಕೋರಿಯರ್ ಕಳುಹಿಸಿದ್ದ ಆರೋಪಿ, ಅದರಲ್ಲಿ ಪತ್ರವನ್ನು ಮಾತ್ರ ಇಟ್ಟಿದ್ದ. ಆ ಬಗ್ಗೆ ಕೇಳಲೆಂದು ವಿನುಶ್ರೀ ಪುನಃ ರಾಕೇಶ್ಗೆ ಕರೆ ಮಾಡಿದ್ದರು. ‘ಕಂಪನಿಯ ಬಹುಮಾನ ಪಡೆದುಕೊಳ್ಳಲು ಶುಲ್ಕ ಪಾವತಿಸಬೇಕು’ ಎಂದಿದ್ದ ಅರೋಪಿ ಹೇಳಿದ್ದ. ಅದನ್ನು ನಂಬಿದ್ದ ವಿನುಶ್ರೀ, ಆರೋಪಿ ಹೇಳಿದ್ದ ಖಾತೆಗೆ ₹77 ಸಾವಿರ ಜಮೆ ಮಾಡಿದ್ದರು. ನಂತರ, ಆರೋಪಿ ನಾಪತ್ತೆಯಾಗಿದ್ದಾನೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ’ ಎಂದೂ ಪೊಲೀಸರು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.