ಬೆಂಗಳೂರು: ‘ರಾಜ್ಯದಲ್ಲಿರುವ ಶಿಲ್ಪಿಗಳಿಗೆ ಸರ್ಕಾರ ಜೀವವಿಮೆ ನೀಡಬೇಕು. ಅವರಿಗೆ ಮಾಸಾಶನ ಹೆಚ್ಚಿಸಿ, ಕಾನೂನುಬದ್ಧ ವ್ಯವಹಾರಗಳಿಗೆ ಅನುಕೂಲವಾಗುವಂತಹ ಗುರುತಿನ ಚೀಟಿ ವಿತರಿಸಬೇಕು’ ಎಂದು ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ವೀರಣ್ಣಾ ಮಾ.ಅರ್ಕಸಾಲಿ ಮನವಿ ಮಾಡಿದರು.
ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು ಸೋಮವಾರ ಹಮ್ಮಿಕೊಂಡಿದ್ದ 16ನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನ ಹಾಗೂ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಅಕಾಡೆಮಿಯು ರಾಷ್ಟ್ರದ ಉದ್ದಗಲಕ್ಕೂ ಶಿಲ್ಪಕಲೆ ಕುರಿತಾದ ಶಿಬಿರಗಳನ್ನು ಏರ್ಪಡಿಸುವ ಮೂಲಕ ಶಿಲ್ಪಕಲೆಯ ಗತವೈಭವ ಉಳಿಸಲು ಪ್ರಯತ್ನಿಸುತ್ತಿದೆ’ ಎಂದರು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಿರಂಜನ ವಾನಳ್ಳಿ, ‘ರಾಜರ ಕಾಲದಲ್ಲಿ ಸಿಕ್ಕಿದಂತಹ ಪ್ರೋತ್ಸಾಹ ಇಂದಿನ ಯುವ ಶಿಲ್ಪ ಕಲಾವಿದರಿಗೆ ಸಿಕ್ಕಲ್ಲಿ, ಜಕಣಾಚಾರಿಯಂತಹ ಶ್ರೇಷ್ಠ ಶಿಲ್ಪಿಗಳು ಹುಟ್ಟುತ್ತಾರೆ. ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಅದ್ಭುತವಾದ ಶಿಲ್ಪಕಲಾಕೃತಿ ರಚಿಸುವ ಕಲಾವಿದರು ರಾಜ್ಯದಲ್ಲಿದ್ದು, ಶಿಲ್ಪಕಲೆ ಕ್ಷೇತ್ರಕ್ಕೆ ಉಜ್ವಲ ಭವಿಷ್ಯವಿದೆ’ ಎಂದು ಹೇಳಿದರು.
ಅಕಾಡೆಮಿಯ ರಿಜಿಸ್ಟ್ರಾರ್ ಆರ್.ಚಂದ್ರಶೇಖರ, ರಾಮ್ಸನ್ಸ್ ಕಲಾ ಪ್ರತಿಷ್ಠಾನದ ಕಾರ್ಯದರ್ಶಿ ಆರ್.ಜಿ.ಸಿಂಗ್, ಶಿಲ್ಪ ಕಲಾವಿದ ಎಂ.ರಾಮಮೂರ್ತಿ ಮತ್ತು ಶಿಲ್ಪಿ ನಾಗಭೂಷಣ್ ಕಾಳಾಚಾರ್ ಭಾಗವಹಿಸಿದ್ದರು. ಮೈಸೂರಿನ ಕಲಾಶ್ರೀ ಗಣೇಶ್ ಭಟ್ ಮತ್ತು ವೃಂದದವರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.