ಬೆಂಗಳೂರು: ‘ನಾವು ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಜೋತು ಬಿದ್ದಿದ್ದೇವೆ. ಆದರೆ, ಚಾರಿತ್ರಿಕ ಸಂದರ್ಭದಲ್ಲಿ ಕಾನೂನನ್ನು ಎತ್ತಿಹಿಡಿದಿದ್ದ ಅವರು, ಬೌದ್ಧ ಧರ್ಮ ಸ್ವೀಕರಿಸುವ ಮೂಲಕ ಬದುಕಿನ ಸಂಯಮವನ್ನೂ ಎಲ್ಲರಿಗೂ ಹೇಳಿಕೊಟ್ಟರು. ದಲಿತರಲ್ಲಿ ಇಂತಹ ಸಂಯಮ ಮತ್ತು ನಾಯಕತ್ವದ ಸಾಮರ್ಥ್ಯ ಬೆಳೆಯಬೇಕಿದೆ’ ಎಂದು ರಂಗಕರ್ಮಿ ಪ್ರಸನ್ನ ಅಭಿಪ್ರಾಯಪಟ್ಟರು.
ಲೇಖಕ ಮೂಡ್ನಾಕೂಡು ಚಿನ್ನ ಸ್ವಾಮಿ 65ರ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,'ಸಮಾಜ ಒಳ್ಳೆಯ ಮತ್ತು ಕೆಟ್ಟ ಎರಡೂ ರೀತಿಯಲ್ಲಿ ಬದಲಾಗಿದೆ. ಆದರೆ, ಈ ಬದಲಾವಣೆಯನ್ನು ನಿರ್ವಹಿಸುವಲ್ಲಿ ನಾವು ಸೋತಿದ್ದೇವೆ ಎನಿಸುತ್ತದೆ’ ಎಂದರು.
‘ಪೇಟೆ ಮತ್ತು ಹಳ್ಳಿಗಳ ನಡುವೆ ಕೊಡುಕೊಳ್ಳುವ ಸಂಬಂಧ ಇಲ್ಲದೇ ಹೋದರೆ ಈ ದೇಶ ಎಂದಿಗೂ ಉದ್ಧಾರ ಆಗುವುದಿಲ್ಲ. ಇಂತಹ ಕೊಡುಕೊಳ್ಳುವ ಸಂಬಂಧ ಮುಂದುವರಿದ ದಲಿತರು ಮತ್ತು ಹಿಂದುಳಿದ ದಲಿತರ ನಡು ವೆಯೂ ನಡೆಯಬೇಕಾದ ಅಗತ್ಯವಿದೆ’ ಎಂದರು.
ಚಿಂತಕ ಇಂದೂಧರ ಹೊನ್ನಾಪುರ, ‘ದಲಿತರು ತಮ್ಮ ಬಲಿಪಶುತ್ವವನ್ನು ಈಗಲೂ ವೈಭವೀಕರಿಸುವುದು ಆತ್ಮವಂಚನೆ. ಮೂಡ್ನಾಕೂಡು ಚಿನ್ನ ಸ್ವಾಮಿ ಯಾವತ್ತೂ ತಮ್ಮ ಸಾಹಿತ್ಯದಲ್ಲಿ ಇದನ್ನು ಮಾಡಲಿಲ್ಲ. ಆದರೆ ದಲಿತ ಸಾಹಿತ್ಯದ ಇತರರ ಕೃತಿಗಳಿಗಿಂತ ಅವರ ಕಾವ್ಯ ಹೆಚ್ಚು ಪರಿಣಾಮಕಾರಿಯಾಗಿದೆ’ ಎಂದರು. ಸುಭಾಷ್ ರಾಜಮಾನೆ ಸಂಪಾದಿಸಿದ ‘ಬಹುತ್ವ ಕಥನ’ ಪುಸ್ತಕ ಬಿಡುಗಡೆ ಮಾಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.