ಬೆಂಗಳೂರು: ರೈಲ್ವೆ ಕೆಳ ಸೇತುವೆಯಲ್ಲಿ ಸಾಗುವ ವಾಹನ ಸವಾರರ ಮೇಲೆ ತ್ಯಾಜ್ಯ ನೀರು ಬೀಳುವುದನ್ನು ತಪ್ಪಿಸಲು ರೈಲ್ವೆ ಸಚಿವ ರಾಜ್ಯ ಸಚಿವ ಸುರೇಶ್ ಅಂಗಡಿ ರೈಲ್ವೆ ಅಧಿಕಾರಿಗಳಿಗೆ ಒಂದು ತಿಂಗಳು ಗಡುವು ನೀಡಿದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಮೂರನೇ ಗೇಟ್ ಉದ್ಘಾಟನೆ ಸಮಾರಂಭದಲ್ಲಿ ಶನಿವಾರ ಮೇಯರ್ ಗಂಗಾಂಬಿಕೆ, ‘ರೈಲು ಸಂಚಾರದ ವೇಳೆ ರೈಲ್ವೆ ಸೇತುವೆ ಕೆಳಗೆ ಸಂಚರಿಸುವುದೇ ಕಷ್ಟ. ಸವಾರರ ಮೇಲೆ ಚಲಿಸುವ ರೈಲಿನ ತ್ಯಾಜ್ಯ ನೀರು ಬೀಳುತ್ತಿದೆ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ. ಇದನ್ನು ತಪ್ಪಿಸಿ’ ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಅಂಗಡಿ, ‘ಮೇಯರ್ ಹೇಳಿದ ಅನುಭವ ನಮಗೂ ಆಗಿದೆ.ನನ್ನ ತಲೆ ಮೇಲೂ ತ್ಯಾಜ್ಯ ನೀರು ಬಿದ್ದಿದೆ. ಒಂದು ತಿಂಗಳಿನಲ್ಲಿ ಸಮಸ್ಯೆ ಬಗೆಹರಿಯಬೇಕು. ಇಲ್ಲದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುವುದಿಲ್ಲ’ ಎಂದು ಎಚ್ಚರಿಸಿದರು.
‘ಬೆಂಗಳೂರಿನ ಸಂಚಾರ ದಟ್ಟಣೆ ಬಗ್ಗೆ ಹೊರ ಊರಿನ ಜನ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಸಬ್ಅರ್ಬನ್ ರೈಲು ಯೋಜನೆಗಳಿಗೆ ಆದ್ಯತೆ ನೀಡಬೇಕಿದೆ. ಈ ಸಂಬಂಧ ಪ್ರಧಾನಿ ಜತೆ ಮಾತನಾಡಿದ್ದೇನೆ’ ಎಂದು ಹೇಳಿದರು.
ಕೆಎಸ್ಆರ್ ರೈಲು ನಿಲ್ದಾಣದಲ್ಲಿ ದಟ್ಟಣೆ ಇರುವ ಕಾರಣ ಮೂರನೇ ಪ್ರವೇಶದ್ವಾರವನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.