ಲೈಂಗಿಕ ದೌರ್ಜನ್ಯ –ಪ್ರಾತಿನಿಧಿಕ ಚಿತ್ರ
ಬೆಂಗಳೂರು: ರಸ್ತೆಯಲ್ಲಿ ನಡೆದು ತೆರಳುತ್ತಿದ್ದ ಯುವತಿಯನ್ನು ಹಿಂಬಾಲಿಸಿ, ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಯ ಪತ್ತೆಗಾಗಿ ಎರಡು ಪೊಲೀಸ್ ತಂಡ ರಚಿಸಲಾಗಿದೆ.
ಸುದ್ದಗುಂಟೆಪಾಳ್ಯ ಠಾಣೆಯ ಎರಡು ಪ್ರತ್ಯೇಕ ತಂಡಗಳು ತಮಿಳುನಾಡಿಗೆ ತೆರಳಿದ್ದು, ಆರೋಪಿಗಾಗಿ ಶೋಧ ಕಾರ್ಯ ನಡೆಸುತ್ತಿವೆ ಎಂದು ಮೂಲಗಳು ತಿಳಿಸಿವೆ.
ಸುದ್ದಗುಂಟೆಪಾಳ್ಯದ ಭಾರತಿ ಲೇಔಟ್ನ ಒಂದನೇ ಕ್ರಾಸ್ನಲ್ಲಿ ಏಪ್ರಿಲ್ 3ರಂದು ರಾತ್ರಿ ಘಟನೆ ನಡೆದಿತ್ತು. ಆರೋಪಿಯ ಕೃತ್ಯ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾದ 1,600 ದೃಶ್ಯಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಆರೋಪಿ ಬೆಂಗಳೂರು ಬಿಟ್ಟು ಹೊಸೂರು ಮಾರ್ಗವಾಗಿ ತಮಿಳುನಾಡಿನ ಕಡೆ ಪರಾರಿ ಆಗಿರುವುದು ಪತ್ತೆಯಾಗಿದೆ. ಬಟ್ಟೆ ಬದಲಿಸಿ ಮಾರ್ಗ ಹಾಗೂ ವಾಹನಗಳ ಬದಲಿಸಿಕೊಂಡು ಆರೋಪಿ ನಾಪತ್ತೆ ಆಗಿದ್ದಾನೆ ಎಂಬುದು ಗೊತ್ತಾಗಿದೆ.
‘ಕೃತ್ಯ ಎಸಗಿ ಆರೋಪಿ ತಮಿಳುನಾಡಿಗೆ ಪರಾರಿ ಆಗಿರುವ ಶಂಕೆ ಇದೆ. ಆತನ ಪತ್ತೆಗಾಗಿ 10 ಮಂದಿಯ ಎರಡು ವಿಶೇಷ ತಂಡ ತಮಿಳುನಾಡಿನಲ್ಲೇ ಕಾರ್ಯಾಚರಣೆ ನಡೆಸುತ್ತಿವೆ’ ಎಂದು ಪೊಲೀಸರು ಮಾಹಿತಿ ನೀಡಿದರು.
ಘಟನೆ ಸಂಬಂಧ ಸ್ಥಳೀಯ ನಿವಾಸಿ ಲೋಕೇಶ್ಗೌಡ ಎಂಬುವರು ನೀಡಿದ ದೂರಿನ ಸಂಬಂಧ ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.