ADVERTISEMENT

ನನ್ನ-ಸಿದ್ದರಾಮಯ್ಯ ಸಂಬಂಧ ಹಾಳು ಮಾಡಲು ಕೆಲವರಿಂದ ಪ್ರಯತ್ನ: ಬಿ.ಆರ್. ಪಾಟೀಲ

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 6:38 IST
Last Updated 2 ಜುಲೈ 2025, 6:38 IST
ಬಿ.ಆರ್. ಪಾಟೀಲ
ಬಿ.ಆರ್. ಪಾಟೀಲ   

ಬೆಂಗಳೂರು: 'ಸಿದ್ದರಾಮಯ್ಯ ಮತ್ತು ನನ್ನ ನಡುವಿನ ಆತ್ಮೀಯ ಸಂಬಂಧವನ್ನು ಹಾಳು ಮಾಡಲು ಕೆಲವರು ಉದ್ದೇಶಪೂರ್ವಕವಾಗಿ ಪ್ರಯತ್ನಿಸುತ್ತಿದ್ದಾರೆ' ಎಂದು ಆಳಂದ ಶಾಸಕ ಬಿ.ಆರ್. ಪಾಟೀಲ ಹೇಳಿದ್ದಾರೆ.

ವಿಡಿಯೊ ಹೇಳಿಕೆ ನೀಡಿರುವ ಅವರು, ಎಲೆಕ್ಟ್ರಾನಿಕ್ ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ ನನ್ನ ಹೇಳಿಕೆಯನ್ನು ತಿರುಚಿ, ತೇಜೋವಧೆ ಮಾಡುವಂತಹ ಕೆಲಸ ಮಾಡುತ್ತಿರುವುದು ಸರಿಯಲ್ಲ' ಎಂದಿದ್ದಾರೆ.

'ನಾನು ಕೆ.ಆರ್. ಪೇಟೆಯಲ್ಲಿ ಆತ್ಮೀಯರ ಜೊತೆ ಮಾತನಾಡುವಾಗ ಸಿದ್ದರಾಮಯ್ಯ ಅವರ ವಿಷಯ ಪ್ರಸ್ತಾಪ ಆದಾಗ, ನಾನು ಅವರ ಬಗ್ಗೆ ಮಾತನಾಡಿದ್ದೇನೆ. ಅವರಿಗೆ ಲಕ್ಕಿ. ಲಾಟರಿ ಹೊಡೆದು ಸಿಎಂ ಆದರು ಎಂದಿದ್ದೆ. ನಾನು ಸೋನಿಯಾ ಗಾಂಧಿಯನ್ನು ಭೇಟಿ ಮಾಡಿಸಿದ್ದೇನೆ ಎಂದು ಹೇಳಿರುವುದು ಸಂಪೂರ್ಣ ತಪ್ಪು. ಸೋನಿಯಾ ಗಾಂಧಿಯನ್ನು ಭೇಟಿ ಮಾಡುವಾಗ ನಾನು ಜೊತೆಗಿದ್ದೆ. ಈ ಸರಿ ಭೇಟಿ ಬೇಡ ಅಂದಿದ್ದಾಗ, ನಾನೇ ಒತ್ತಾಯ ಮಾಡಿಸಿ ಭೇಟಿ ಮಾಡಿ ಎಂದಾಗ ಅವರು ಹೋಗಿದ್ದರು' ಎಂದಿದ್ದಾರೆ.

ADVERTISEMENT

'ಸಿದ್ದರಾಮಯ್ಯ ಅವರು ಮಾಸ್ ಲೀಡರ್. ಅವರನ್ನು ಮುಖ್ಯಮಂತ್ರಿ ಮಾಡುವ ಶಕ್ತಿ ನನಗಿಲ್ಲ. ನಾವು ಒಂಬತ್ತು ಜನ ಶಾಸಕರು ಜೆಡಿಎಸ್‌ ಬಿಟ್ಟು ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಸೇರಿದ್ದೆವು. ಕಾಂಗ್ರೆಸ್ ಕೂಡಾ ಅವರ ಜನಬೆಂಬಲ ನೋಡಿ ಅವರನ್ನು ಮುಖ್ಯಮಂತ್ರಿ ಮಾಡಿದೆ. ಹೊರತಾಗಿ ನಾವು ಹೇಳಿದ್ರಿಂದ ಮಾಡಿಲ್ಲ' ಎಂದು ತಿಳಿಸಿದ್ದಾರೆ.

'ವಸತಿ ಯೋಜನೆಗಳಲ್ಲಿ ಲಂಚದ ವ್ಯವಹಾರ ನಡೆಯುತ್ತಿದೆ' ಎಂದು ಶಾಸಕ ಬಿ.ಆರ್‌.ಪಾಟೀಲ ಅವರು ಹೇಳಿದ್ದ ಆಡಿಯೊ ಬಹಿರಂಗವಾಗಿತ್ತು. ಮತ್ತೆ ಅವರು 'ಸಿದ್ದರಾಮಯ್ಯ ಲಕ್ಕಿ. ಲಾಟರಿ ಹೊಡೆದುಬಿಟ್ಟರು. ನಾನೇ ಜತೆಗೆ ಹೋಗಿ ಸೋನಿಯಾ ಗಾಂಧಿ ಭೇಟಿ ಮಾಡಿಸಿದ್ದೆ. ಹಣೆಬರಹ ಚೆನ್ನಾಗಿತ್ತು, ಸಿಎಂ ಆದರು. ನನ್ನ ಗ್ರಹಚಾರ ..., ಗಾಡ್‌ ಇಲ್ಲ, ಪಾದರ್ರೂ ಇಲ್ಲ...,' ಎಂದು ಅವರು ಹೇಳಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಮಂಗಳವಾರ ಹರಿದಾಡಿತ್ತು.

ಕೆ.ಆರ್‌.ಪೇಟೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಕೊಠಡಿಯೊಂದರಲ್ಲಿ ಕುಳಿತು ಪಾಟೀಲ್ ಅವರು ಮೊಬೈಲ್‌ನಲ್ಲಿ ಮಾತನಾಡುವುದು ಆ ವಿಡಿಯೊದಲ್ಲಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ‘ಹೌದು ನಾನು. ಅದೃಷ್ಟದ ಮುಖ್ಯಮಂತ್ರಿ. ನಾನು ಮತ್ತು ಪಾಟೀಲ್‌ ಒಟ್ಟಿಗೆ ಶಾಸಕರಾಗಿದ್ದು, ಅದಕ್ಕೇ ಹೇಳಿರಬಹುದು ಗೊತ್ತಿಲ್ಲ. ಅವರನ್ನು ಕರೆಸಿ ಮಾತಾಡುತ್ತೇನೆ‘ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.