ಬೆಂಗಳೂರು: ಗಡಿ ಕಾಯುವ ಯೋಧರಿಗಾಗಿ ‘ವೈಟ್ ಕ್ಯಾಪ್ಸ್ ಇಂಟರ್ನ್ಯಾಷನಲ್ ಸ್ಕೂಲ್ ಆಫ್ ಪೇಸ್ಟ್ರಿ’ ಸಂಸ್ಥೆಯ ಬಾಣಸಿಗರಾದ ಅಕ್ಷಯ್ ಗೌಡ ಹಾಗೂ ರೋಹಿತ್ ಅವರು 16 ಕೆ.ಜಿಯ ‘ಚಾಕೊಲೆಟ್ ಹಾಗೂ ಕೇಕ್ ಕಲಾಕೃತಿ’ ತಯಾರಿಸಿದ್ದಾರೆ.
‘ನಮಗೆ ಆಪತ್ತು ಎದುರಾದಾಗ ಮಾತ್ರ ಯೋಧರನ್ನು ನೆನೆಯುತ್ತೇವೆ. ಆದರೆ, ಅವರು ನಮ್ಮಿಂದ ಏನನ್ನೂ ಅಪೇಕ್ಷಿಸುವುದಿಲ್ಲ. ಈ ರೀತಿ ನಿಸ್ವಾರ್ಥ ಸೇವೆ ಸಲ್ಲಿಸುವ ಯೋಧರಿಗೆ ಗೌರವ ಸಲ್ಲಿಸುವ ಪ್ರಯತ್ನ ಮಾಡಿದ್ದೇವೆ. ಕೇಕ್ ತಯಾರಿಕೆಗೆ 35 ಗಂಟೆ ಸಮಯ ಬೇಕಾಯಿತು. ಇದರಲ್ಲಿ ಕೋಕೊ ಬಟರ್, ಡಾರ್ಕ್ ಚಾಕೊಲೆಟ್, ಕಾರ್ನ್ ಸಿರಪ್, ನೀರು, ಗ್ಲೂಕೋಸ್ ಹಾಗೂ ರೈಸ್ ಕ್ರಿಸ್ಪಿಗಳನ್ನು ಬಳಕೆ ಮಾಡಲಾಗಿದೆ’ ಎಂದು ರೋಹಿತ್ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಸ್ಥೆಯ ಸಹ ಸಂಸ್ಥಾಪಕ ಅರವಿಂದ ಪ್ರಸಾದ್, ‘ಗಣ್ಯರ ಪ್ರತಿಮೆ ರೂಪದಲ್ಲಿಸಾಮಾನ್ಯವಾಗಿ ಕೇಕ್ಗಳನ್ನು ತಯಾರಿಸುತ್ತಾರೆ. ಆದರೆ, ಯೋಧರ ಪ್ರತಿಮೆಗಳನ್ನು ಚಾಕೊಲೆಟ್ನಲ್ಲಿ ತಯಾರಿಸಿ ಹುಡುಗರು ಕ್ರಿಯಾಶೀಲತೆಯನ್ನು ಮೆರೆದಿದ್ದಾರೆ’ ಎಂದರು.
ಯುವಕರ ಈ ಕ್ರಿಯಾಶೀಲತೆಗೆ ನಾನು ಮಾರುಹೋಗಿದ್ದೇನೆ. ರಾಜ್ಯದಾದ್ಯಂತ ‘ಮನೆಮನೆಯಲ್ಲಿ ಒಂದು ಬಾವುಟ’ ಹಾಗೂ ‘ತಿರಂಗ್ ಕಾ ಭಾರತ್ ಯಾತ್ರಾ’ ಆಂದೋಲನಗಳನ್ನು ಆರಂಭಿಸಿದ್ದೇನೆ’ ಎಂದುನಿವೃತ್ತ ಯೋಧ ಎಸ್.ಎಚ್.ಭಾಸ್ಕರ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.