ಬೆಂಗಳೂರು:ಸಾಧಕರ ಚಿಂತನೆಗಳನ್ನು ಅರಿಯದ ರಾಜಕಾರಣಿಗಳು ಅವರನ್ನು ಪರಸ್ಪರ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಬೇಸರ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ನಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಇತರ ಮಹಾಪುರುಷರ ತತ್ವಗಳ ತೌಲನಿಕ ಅಧ್ಯಯನ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
‘ಗಾಂಧೀಜಿ-ಅಂಬೇಡ್ಕರ್, ನೆಹರೂ-ಪಟೇಲ್, ಗಾಂಧಿ–ನೆಹರೂ ಪರಸ್ಪರ ಸೈದ್ಧಾಂತಿಕ ವಿರೋಧಿಗಳಾಗಿದ್ದರು. ವೈಯಕ್ತಿಕವಾಗಿ ಉತ್ತಮ ಸ್ನೇಹಿತರಾಗಿದ್ದರು. ಇವರೆಲ್ಲರೂ ಅವರದೇ ಆದ ವಿಚಾರಗಳ ಮೂಲಕ ದೇಶದ ಒಳಿತಿಗಾಗಿ ಹೋರಾಡಿದವರು. ಗಾಂಧಿ ಮತ್ತು ಅಂಬೇಡ್ಕರ್, ಇವರಲ್ಲಿ ಒಬ್ಬರು ಪ್ರಾಮಾಣಿಕರು, ಇನ್ನೊಬ್ಬರು ಅಪ್ರಾಮಾಣಿಕರು ಎಂಬಂತೆ ಬಿಂಬಿಸಿ, ಸಿನಿಮಾದಲ್ಲಿ ಕಂಡು ಬರುವ ನಾಯಕ, ಖಳನಾಯಕರ ಪಾತ್ರಗಳಲ್ಲಿ ಅವರನ್ನು ಕಾಣುತ್ತಿದ್ದಾರೆ. ಗಾಂಧಿ ಮತ್ತು ಅಂಬೇಡ್ಕರ್ ಅವರ ಚಿಂತನೆಗಳನ್ನು ಅವಲೋಕಿಸದೆ ಸುಖಾಸುಮ್ಮನೆ ಟೀಕಿಸುವುದೂ ಸರಿಯಲ್ಲ’ ಎಂದು ಹೇಳಿದರು.
‘ಓಟಿಗಾಗಿ ಅಪಹರಣ ರಾಜಕಾರಣ ನಡೆಯುತ್ತಿದೆ. ಯಾರಿಗೂ ಬೇಕಾದರೂ ದೇಶದ್ರೋಹದ ಹಣೆಪಟ್ಟಿ ಕಟ್ಟಬಹುದು ಎಂಬಂತಾಗಿದೆ. ಸೈದ್ದಾಂತಿಕ ರಾಜಕಾರಣ ಭಯೋತ್ಪಾದಕ ರಾಜಕಾರಣವಾಗಿ ಮಾರ್ಪಟ್ಟಿದೆ. ಮಾತ್ರವಲ್ಲ ಬೌದ್ಧಿಕ ಭ್ರಷ್ಟಾಚಾರವೂ ಹೆಚ್ಚಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಸಹೋದರತೆ, ಸಹಬಾಳ್ವೆ, ಸಹಿಷ್ಣುತೆ, ಸಮಾನತೆ ರೂಡಿಸಿಕೊಳ್ಳಬೇಕು. ನಾಡು, ಜಲ, ಧರ್ಮ ನಮ್ಮದು ಎಂಬ ಭಾವನೆ ಎಲ್ಲರಲ್ಲೂ ಅರಿವು ಮೂಡಿಸಬೇಕು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.