ಬೆಂಗಳೂರು: ‘ರಾಜ್ಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ಕೌನ್ಸೆಲಿಂಗ್ ನಡೆಸಲಾ
ಗಿದೆ. ಆದರೆ, ಯಾರಿಗೂ ಮೂವ್ಮೆಂಟ್ ಆರ್ಡರ್ (ವರ್ಗಾವಣೆ ಜಾರಿ ಆದೇಶ) ನೀಡಿಲ್ಲ ಎಂದು ನಿನ್ನೆಯಷ್ಟೇ ಕೋರ್ಟ್ಗೆ ನೀಡಲಾಗಿದ್ದ ಮಾಹಿತಿ ತಪ್ಪು’ ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ತಿಳಿಸಿದೆ.
ಈ ಕುರಿತಂತೆ ಸರ್ಕಾರದ ಪರ ವಕೀಲರು ಗುರುವಾರ ನ್ಯಾಯಮೂರ್ತಿ ಎಲ್.ನಾರಾಯಣ ಸ್ವಾಮಿ ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ಮೌಖಿಕವಾಗಿ ತಿಳಿಸಿದರು.
ಇದಕ್ಕೆ ನ್ಯಾಯಪೀಠ, ‘ನೀವು ಏನೇ ಹೇಳುವುದಿದ್ದರೂ ಅದನ್ನು ಮೆಮೊ (ಜ್ಞಾಪನಾ ಪತ್ರ) ಮೂಲಕ ನ್ಯಾಯಪೀಠಕ್ಕೆ ಸಲ್ಲಿಸಿ’ ಎಂದು ಸೂಚಿಸಿದೆ.
‘ವರ್ಗಾವಣೆ ನೀತಿಗೆ ಸಂಬಂಧಿಸಿದಂತೆ ಹಿರಿಯ ವಕೀಲ ವಿ. ಲಕ್ಷ್ಮೀನಾರಾಯಣ ಅವರು ಅರ್ಜಿದಾರರ ಪರವಾಗಿ ನೀಡುವ ಸಲಹೆಗಳನ್ನು ಇದೇ 30ರೊಳಗೆ ಪರಿಗಣಿಸಬೇಕು’ ಎಂದು ನ್ಯಾಯಪೀಠ ಈಗಾಗಲೇ ಸರ್ಕಾರಕ್ಕೆ ನಿರ್ದೇಶಿಸಿರುವುದನ್ನು ಇಲ್ಲಿ ಸ್ಮರಿಸಬಹುದು.
ದೂರು: ‘ಕೋರಿಕೆ ಮತ್ತು ಕಡ್ಡಾಯ ವರ್ಗಾವಣೆಯಲ್ಲಿ ಸ್ಧಳ ನಿಯುಕ್ತಿ ಹೊಂದಿರುವ ಶಿಕ್ಷಕರು ಕರ್ತವ್ಯದಿಂದ ಬಿಡುಗಡೆಯಾಗಲು ವರ್ಗಾವಣೆ ಜಾರಿ ಆದೇಶವನ್ನು ಸಂಬಂಧಿಸಿದ ಶಿಕ್ಷಣ ಕಚೇರಿಯಲ್ಲಿ ಪಡೆಯುವಂತೆ ತಿಳಿಸಲಾಗಿದೆ’ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಎಂ.ನಾರಾಯಣ ಸ್ವಾಮಿ ಹಾಗೂ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ದೂರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.