ಬೆಂಗಳೂರು: ‘ಕೇಂದ್ರದ ಆರ್ಥಿಕ ನೀತಿಗಳಿಂದಾಗಿ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ಉದ್ಯೋಗ
ಸೃಷ್ಟಿಸಿ ಜನರ ಬದುಕು ಹಸನಾಗಿಸಬೇಕಿದ್ದ ಸರ್ಕಾರ ಅವರನ್ನು ಕಷ್ಟದ ಕೂಪಕ್ಕೆ ದೂಡುತ್ತಿದೆ’ ಎಂದು ಗಾಂಧಿನಗರದ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಆರೋಪಿಸಿದರು.
ಚನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದ ಆಟದ ಮೈದಾನದಲ್ಲಿಪಕ್ಷದ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಆಟೊ ಚಾಲಕರಿಗೆ ಆಹಾರದ ಕಿಟ್ ವಿತರಿಸಿ ಮಾತನಾಡಿದರು.
‘ಮೋದಿ ಸರ್ಕಾರದ ವೈಫಲ್ಯಗಳಿಂದಾಗಿ ಆರ್ಥಿಕತೆ ಪಾತಾಳಕ್ಕೆಕುಸಿದಿದೆ. ಕೋವಿಡ್ ಬಳಿಕ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಕೋವಿಡ್ ನಿಯಂತ್ರಿಸುವ ಸಲುವಾಗಿ ಲಾಕ್ಡೌನ್ ಹೇರಿದ್ದರಿಂದ ಜನ ಇದ್ದ ಕೆಲಸ
ವನ್ನೂ ಕಳೆದುಕೊಂಡಿದ್ದಾರೆ.ಹೀಗಾಗಿ ಅವರ ಜೀವನ ನಿರ್ವಹಣೆ ಕಷ್ಟವಾಗಿದೆ. ಹೀಗಿದ್ದರೂ ಸರ್ಕಾರ ಅವರ
ನೆರವಿಗೆ ಧಾವಿಸಲಿಲ್ಲ. ಕೋವಿಡ್ ಎರಡನೇ ಅಲೆ ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಯಿತು. ಒಳ್ಳೆಯ ದಿನಗಳು ಬರುತ್ತವೆ ಎಂದು ಹೇಳುತ್ತಲೇ ತೈಲ ಹಾಗೂ ಅಡುಗೆ ಅನಿಲ ದರ ಏರಿಕೆ ಮಾಡಲಾಗುತ್ತಿದೆ. ಆ ಮೂಲಕ ಗಾಯದ ಮೇಲೆ ಬರೆ ಎಳೆಯಲಾಗುತ್ತಿದೆ’ ಎಂದು ಅವರು ದೂರಿದರು.
ವಿಧಾನಪರಿಷತ್ ಸದಸ್ಯ ಯು.ಬಿ.ವೆಂಕಟೇಶ್, ‘ಕೋವಿಡ್ನಿಂದಾಗಿ ಜನ ಸಾಕಷ್ಟು ಕಷ್ಟ ಅನುಭವಿಸುತ್ತಿದ್ದಾರೆ. ಅವರಿಗೆ ನೆರವಾಗುವುದು ನನ್ನ ಧರ್ಮ. ಪಕ್ಷವು ಪುಣ್ಯದ ಕೆಲಸ ಮಾಡಲು ಅನುವು ಮಾಡಿಕೊಟ್ಟಿದೆ. ಬಸವನಗುಡಿ ಕ್ಷೇತ್ರದಲ್ಲಿ ನಾಲ್ಕು ತಿಂಗಳಿಂದ ಹಲವು ಮಾನವೀಯ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದೇವೆ. ಬಡವರು, ಕೂಲಿಕಾರ್ಮಿಕರಿಗೆ ನೆರವಿನ ಹಸ್ತ ಚಾಚಿದ್ದೇವೆ. ಬಿಜೆಪಿ ಸರ್ಕಾರ ಬಡವರಿಗೆ ನೆರವಾಗುವ ಬದಲು ಅಗತ್ಯ ವಸ್ತುಗಳ ಬೆಲೆ ಏರಿಸಿ ಅವರನ್ನು ಸಂಕಷ್ಟಕ್ಕೆ ದೂಡುತ್ತಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.