ರಾಜರಾಜೇಶ್ವರಿನಗರ: ‘ಸಮಾಜದಲ್ಲಿರುವ ನೊಂದ, ಅಶಕ್ತ ಮಹಿಳೆಯರಿಗೆ ಆಸರೆ ನೀಡಿ, ಧೈರ್ಯ ತುಂಬುವ ಕೆಲಸ ಮಾಡಬೇಕು’ ಎಂದು ಕೆಪಿಸಿಸಿ ವಕ್ತಾರೆ ಎಚ್.ಕುಸುಮಾ ಹೇಳಿದರು.
ಲಗ್ಗೆರೆಯಲ್ಲಿ ಆಶ್ರಯ ಮಹಿಳಾ ವೇದಿಕೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ‘ಸ್ತ್ರೀ ಸಂಭ್ರಮ – 2025’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಗಂಡನಿಲ್ಲದ ಹೆಣ್ಣುಮಕ್ಕಳನ್ನು ಸಮಾಜ ಬಹಳ ಕೆಟ್ಟದಾಗಿ ನೋಡುತ್ತದೆ. ಜನರು ಅಪಪ್ರಚಾರ ಮಾಡುತ್ತಾರೆ. ನನ್ನ ವಿರುದ್ಧವೇ ಅಪಪ್ರಚಾರ ನಡೆಯುತ್ತಿದೆ. ಇದ್ಯಾವುದಕ್ಕೂ ಅಂಜದೇ, ಸಮಾಜ ಸೇವೆಗೆ ಬಂದಿದ್ದೇನೆ’ ಎಂದರು.
ಕಾಂಗ್ರೆಸ್ ಮುಖಂಡ ಲಗ್ಗೆರೆ ನಾರಾಯಣಸ್ವಾಮಿ ‘ಇತಿಹಾಸದಲ್ಲೂ ಹೆಣ್ಣಿನ ಮೇಲೆ ದಬ್ಬಾಳಿಕೆ ನಡೆದಿದೆ. ಆಗ ಮಹಿಳೆಯರು ಹೋರಾಟದ ಮೂಲಕ ನ್ಯಾಯ ಪಡೆದಿದ್ದಾರೆ’ ಎಂದರು.
ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಬಿ.ಆರ್.ನಂಜುಡಪ್ಪ, ಬಿಬಿಎಂಪಿ ಮಾಜಿ ಸದಸ್ಯ ಎಚ್.ಎಸ್.ಸಿದ್ದೇಗೌಡ, ಪಾಲಿಕೆ ಮಾಜಿ ಸದಸ್ಯರಾದ ವೇಲುನಾಯ್ಕರ್, ಆಶಾಸುರೇಶ್, ಜಿ.ಮೋಹನ್ ಕುಮಾರ್, ರೂಪಲಿಂಗೇಶ್ ಮಾತನಾಡಿದರು. ಪಾಲಿಕೆ ಮಾಜಿ ಸದಸ್ಯೆ ಮಂಜುಳನಾರಾಯಣಸ್ವಾಮಿ ಸಮಾರಂಭದ ಅಧ್ಯಕ್ಷತೆ ವಹಿಸಿದರು.
ಕಾರ್ಯಕ್ರಮದಲ್ಲಿ ನಟಿ ರೇಖಾದಾಸ್, ಮೈಸೂರು ಮಂಜುಳ, ಆರೋಗ್ಯ ಇಲಾಖೆಯ ಸೌಭಾಗ್ಯ, ರೂಪದರ್ಶಿ ಅರುಣ ಅಶೋಕ್, ಪೌರಕಾರ್ಮಿಕ ಮಹಿಳೆಯರಾದ ರಜಿಯಾ, ಮುನಿಯಮ್ಮ ಅವರನ್ನು ಸನ್ಮಾನಿಸಲಾಯಿತು. ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ 250ಕ್ಕೂ ಹೆಚ್ಚು ಮಂದಿಗೆ ಬಹುಮಾನ ವಿತರಿಸಲಾಯಿತು.
ಆಶ್ರಯ ಮಹಿಳಾ ವೇದಿಕೆಯ ಕಾಂಚನ, ಅನುಸೂಯ, ಗಾಯತ್ರಿ, ಶಶಿಕಲಾ, ಸರಸ್ವತಿ, ಗೀತಾ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.