ADVERTISEMENT

ಅಂಗನವಾಡಿ ನೌಕರರಿಂದ ರಸ್ತೆತಡೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 8:55 IST
Last Updated 20 ಅಕ್ಟೋಬರ್ 2012, 8:55 IST

ಬಸವಕಲ್ಯಾಣ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಲ್ಲಿನ ಹಳೆಯ ತಹಸೀಲ ಕಚೇರಿ ಎದುರು ಶುಕ್ರವಾರ ಧರಣಿ ನಡೆಸುತಿದ್ದ ಅಂಗನವಾಡಿ ನೌಕರರು ಮನವಿ ಪತ್ರ ಸ್ವೀಕರಿಸಲು ಅಧಿಕಾರಿಗಳು ಸ್ಥಳಕ್ಕೆ ಬಾರದ ಕಾರಣ ಮುಖ್ಯರಸ್ತೆಗೆ ಆಗಮಿಸಿ ದಿಢೀರನೆ ರಸ್ತೆತಡೆ ನಡೆಸಿದರು.

ರಸ್ತೆ ತಡೆ ನಡೆಸಿದ್ದರಿಂದ ವಾಹನ ಸಂಚಾರಕ್ಕೆ ಕೆಲಕಾಲ ಅಡ್ಡಿಯಾಯಿತು.  ಪೊಲೀಸ್ ಅಧಿಕಾರಿಗಳು ಆಗಮಿಸಿ ರಸ್ತೆತಡೆ ನಿಲ್ಲಿಸಲು ಕೇಳಿಕೊಂಡರಲ್ಲದೆ, ಶಿರಸ್ತೇದಾರರು ಸ್ಥಳಕ್ಕೆ ಆಗಮಿಸಿದ್ದ ರಿಂದ ಮತ್ತೆ ನೌಕರರೆಲ್ಲ ಧರಣಿ ಸ್ಥಳಕ್ಕೆ ಹೋಗಿ ಮನವಿ ಪತ್ರ ಸಲ್ಲಿಸಿದರು.

ಬೆಳಿಗ್ಗೆ ರ‌್ಯಾಲಿ ಮೂಲಕ ಹಳೆಯ ತಹಸೀಲ ಕಚೇರಿಗೆ ಆಗಮಿಸಿದ ಅಂಗನವಾಡಿ ನೌಕರರು ಅಲ್ಲಿ ಕೆಲಕಾಲ ಧರಣಿ ಕೈಗೊಂಡರು. ಈ ಸಂದರ್ಭದಲ್ಲಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷೆ ಸರೋಜನಿ ಗಾಯಕವಾಡ ಮತ್ತು ಪ್ರಧಾನ ಕಾರ್ಯದರ್ಶಿ ಶ್ರೀದೇವಿ ಚಿವಡೆ ಮಾತನಾಡಿ ನೌಕರರಿಗೆ ಕನಿಷ್ಠ 10 ಸಾವಿರ ರೂಪಾಯಿ ವೇತನ ಪಾವತಿಸಬೇಕು. ಸೇವೆಯನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರದಿಂದ ಯಾವುದೇ ಯೋಜನೆ ರೂಪದಲ್ಲಿ ನೌಕರರಿಗೆ ಹೆಚ್ಚಿನ ಕೆಲಸ ಒಪ್ಪಿಸಬಾರದು ಎಂದು ಆಗ್ರಹಿಸಿದರು. ಸೇವೆ ಕಾಯಮಾತಿ ಮತ್ತು ಹೆಚ್ಚಿನ ವೇತನ ಕೊಡುವ ಸಂಬಂಧ ಸರ್ಕಾರದ ಮೇಲೆ ಒತ್ತಡ ಹೇರುವುದಕ್ಕಾಗಿ ನವೆಂಬರ್ 3-5 ರಂದು ಮೈಸೂರಿನಲ್ಲಿ ರಾಜ್ಯಮಟ್ಟದ ಸಮ್ಮೇಳನ ನಡೆಸಲಾಗುವುದು.   26ಮತ್ತು 27 ರಂದು ದೆಹಲಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದರು.

ಹಿರಿಯ ಮುಖಂಡ ಗುಂಡಪ್ಪ ಕಾಟೆ, ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಸುನಿಲ ಸ್ವಾಮಿ ಮಾತನಾಡಿ ಸರ್ಕಾರ ಶೀಘ್ರ ಅಂಗನವಾಡಿ ನೌಕರರ ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿಕೊಂಡರು.

ಪ್ರಮುಖರಾದ ಶರಣಮ್ಮ ಮುಡಬಿ, ಮಂದಾಕಿನಿ ಹುಲಸೂರ, ಜಯಶ್ರೀ ಪ್ರತಾಪುರ, ಶಾಂತಾಬಾಯಿ  ಮತ್ತಿತರ ನೌಕರರು ಪಾಲ್ಗೊಂಡಿದ್ದರು. ನಗರ ಠಾಣೆ ಸಬ್ ಇನ್‌ಸ್ಪೆಕ್ಟರ್ ಉಮೇಶ ಕಾಂಬಳೆ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.