ADVERTISEMENT

`ಆತ್ಮಶುದ್ದಿಗೆ ಶರಣರ ವಚನ ಸಂಜೀವಿನಿ'

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 6:37 IST
Last Updated 5 ಏಪ್ರಿಲ್ 2013, 6:37 IST

ಭಾಲ್ಕಿ: ಮಾನವನ ಉದ್ಧಾರಕ್ಕೆ ಶರಣರ ವಚನಗಳು ಅವಶ್ಯಕವಾಗಿವೆ ಎಂದು ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು. ಪಟ್ಟಣದ ಚನ್ನಬಸವಾಶ್ರಮದಲ್ಲಿ ಡಾ.ಚನ್ನಬಸವ ಪಟ್ಟದ್ದೇವರ 14ನೇ ಸ್ಮರಣೋತ್ಸವ, ಬಸವ ಜಯಂತಿ ಆಚರಣೆ ಶತಮಾನೋತ್ಸವ, ವಚನ ಜಾತ್ರೆ ಮಹೋತ್ಸವ ಮತ್ತು ವಚನ ದರ್ಶನ ಪ್ರವಚನ ಉದ್ಘಾಟನೆ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

ಬಸವಾದಿ ಶರಣರ ಸತ್ಯ ಶುದ್ಧ ಕಾಯಕದಿಂದ ಹೊರ ಬಂದ ಅನುಭಾವದ ನುಡಿಗಳೇ ವಚನಗಳಾಗಿವೆ ಎಂದರು. ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ.ಜಿ.ಬಿ. ವಿಸಾಜಿ ಮಾತನಾಡಿ, ಶರಣ ಸಾಹಿತ್ಯದಲ್ಲಿ ಚುಂಬಕ ಶಕ್ತಿ ಅಡಕವಾಗಿದೆ, ಅಂತಲೇ ಶರಣ ಕೂಟಕ್ಕೆ ಹಂಬಲಿಸಿ ಜಗತ್ತಿನ ಮೂಲೆ ಮೂಲೆಯಿಂದ ಶರಣ ಗಣ ಬಂದು ಕಲ್ಯಾಣದಲ್ಲಿ ಸೇರಿದ್ದು ಕಾಣಬಹುದ್ದಾಗಿದೆ ಎಂದು ನುಡಿದರು.

ಅಕ್ಕನ ಬಳಗದ ಸುಶಿಲಾಬಾಯಿ ಕೊಳ್ಳಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಉಪನ್ಯಾಸಕ ಚಂದ್ರಕಾಂತ ಬಿರಾದಾರ್ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶಂಭುಲಿಂಗ ಕಾಮಣ್ಣ, ಪ್ರವಚನಕಾರ ತುಮಕೂರು ಜಿಲ್ಲೆಯ ಚಿಕ್ಕತೊಟ್ಲುಕೆರೆ ಕ್ಷೇತ್ರದ ಶ್ರೀ ಅಟವೀಸ್ವಾಮಿ ವಿದ್ಯಾರ್ಥಿ ವಸತಿ ನಿಲಯದ ಸಂಚಾಲಕ ಪ್ರೊ.ಶಂಕರಗೌಡ ಎಂ. ಬಿರಾದಾರ, ಗುರುಬಸವ ದೇವರು, ನಿರಂಜನ ದೇವರು ಇದ್ದರು. ಸಂಗಮೇಶ್ವರಿ ಸ್ವಾಮಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT