ಬಸವಕಲ್ಯಾಣ: ತಾಲ್ಲೂಕಿನ ಉರ್ಕಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ಸುಡುವ ಬಿಸಿಲಿನಲ್ಲಿ ಹೊಲಗಳಲ್ಲಿನ ಬಾವಿಗಳಿಗೆ ಹೋಗಿ ನೀರು ತರಬೇಕಾದ ಪರಿಸ್ಥಿತಿ ಇದೆ.
ಇಲ್ಲಿನ ಕೆರೆ ಹತ್ತಿರದಲ್ಲಿನ ಒಂದು ತೆರೆದ ಬಾವಿ ಮತ್ತು ಇನ್ನೊಂದು ಕೊಳವೆ ಬಾವಿಯಿಂದ ಗ್ರಾಮಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಈ ಎರಡರಲ್ಲೂ ಸಾಕಷ್ಟು ನೀರು ಇಲ್ಲದ್ದರಿಂದ ನೀರಿನ ತೊಟ್ಟಿಗಳಿಗೆ ಸಮರ್ಪಕವಾಗಿ ನೀರು ಸರಬರಾಜು ಆಗುತ್ತಿಲ್ಲ. `ನೀರಿಗಾಗಿ ಕೊಡಗಳನ್ನು ತೊಟ್ಟಿಗಳ ಎದುರಲ್ಲಿ ಸಾಲಿನಲ್ಲಿ ಇಟ್ಟು ಗಂಟೆಗಟ್ಟಲೇ ಕಾಯುತ್ತ ಕುಳಿತರೂ ಕೆಲ ಕೊಡಗಳಷ್ಟು ಮಾತ್ರ ನೀರು ದೊರಕುತ್ತಿದೆ' ಎಂದು ಗ್ರಾಮ ಪಂಚಾಯಿತಿ ಸದಸ್ಯೆ ಕಮಲಾಬಾಯಿ ಜಮಾದಾರ ಹೇಳಿದ್ದಾರೆ.
`ಗ್ರಾಮದಲ್ಲಿ ನಾಲ್ಕು ಸ್ಥಳಗಳಲ್ಲಿ ನೀರಿನ ತೊಟ್ಟಿಗಳಿವೆ. ಎಲ್ಲರೂ ಈ ತೊಟ್ಟಿಗಲಿಂದಲೇ ನೀರು ತೆಗೆದುಕೊಂಡು ಹೊಗುತ್ತಾರೆ. ಆದರೆ, ಕೆಲ ದಿನಗಳಿಂದ ಸಮರ್ಪಕವಾಗಿ ನೀರು ಸಿಗುತ್ತಿಲ್ಲ. ಆದ್ದರಿಂದ ಮಹಿಳೆಯರು ಮತ್ತು ಮಕ್ಕಳು ದೂರದ ಹೊಲಗಳಲ್ಲಿನ ಬಾವಿಗಳಿಂದ ನೀರು ತರಬೇಕಾಗುತ್ತಿದೆ' ಎಂದು ಗೋವಿಂದ ಬಿರಾದಾರ, ಶಿವಾಜಿ ಪಾಟೀಲ, ಮಾರುತಿ ತೋಟೆ ಹೇಳಿದ್ದಾರೆ.
`ಇನ್ನೊಂದು ಕೊಳವೆ ಬಾವಿ ಕೊರೆದು ನೀರಿನ ಸಮಸ್ಯೆ ಬಗೆಹರಿಸಬೇಕು' ಎಂದು ದತ್ತು ಸರಪಂಚ್ ಮತ್ತು ವೆಂಕಟ ಚಿಟ್ಟೇಕರ್ ಆಗ್ರಹಿಸಿದ್ದಾರೆ. `ಚಿಟ್ಟಾ ರಸ್ತೆಯಲ್ಲಿನ ಜಿಲ್ಲಾ ಪಂಚಾಯಿತಿಯ ಬಾವಿಯ ಹೂಳು ತೆಗೆಯಲಾಗುತ್ತಿದೆ. ಆದರೂ ಅಲ್ಲಿನ ನೀರು ಕುಡಿಯಲು ಯೋಗ್ಯವಾಗಿಲ್ಲ. ಆದ್ದರಿಂದ ಕೆರೆ ಹತ್ತಿರದಲ್ಲಿನ ತೆರೆದ ಬಾವಿಯ ಹೂಳು ತೆಗೆಯಬೇಕು' ಎಂದು ಮುತ್ತಮ್ಮ ಹಾಗೂ ಮಹಿಳೆಯರು ಒತ್ತಾಯಿಸಿದ್ದಾರೆ.ಶ್ರೀ
**
ನೀರಿನ ತೊಟ್ಟಿ ಹತ್ತಿರದಲ್ಲಿ ಕೊಡಗಳನ್ನು ಸಾಲಿನಲ್ಲಿ ಇಟ್ಟು ಗಂಟೆಗಟ್ಟಲೇ ಕುಳಿತರೂ ಪ್ರತಿಯೊಬ್ಬರಿಗೆ ನಾಲ್ಕೈದು ಕೊಡ ಮಾತ್ರ ನೀರು ದೊರಕುತ್ತಿದೆ
– ಕಮಲಬಾಯಿ ಜಮಾದಾರ,ಗ್ರಾಮ ಪಂಚಾಯಿತಿ ಸದಸ್ಯೆ
ಮಾಣಿಕ್ ಭುರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.