ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ: 26,168 ವಿದ್ಯಾರ್ಥಿಗಳು

ಜಿಲ್ಲೆಯ 90 ಕೇಂದ್ರಗಳಿಗೂ ‘ಜಾಗೃತ ದಳ’ ನೇಮಕ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2014, 9:59 IST
Last Updated 19 ಮಾರ್ಚ್ 2014, 9:59 IST

ಬೀದರ್: ಜಿಲ್ಲೆಯಲ್ಲಿ ಮಾರ್ಚ್ 28ರಿಂದ ಏಪ್ರಿಲ್ 9ರವರೆಗೆ ನಡೆಯುವ ಪ್ರಸಕ್ತ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಜಿಲ್ಲೆಯಲ್ಲಿ 26,168 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ.

ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆ ಸೇರಿ ವಿವಿಧ 447 ಪ್ರೌಢಶಾಲೆಗಳಿಗೆ ಸೇರಿದ ವಿದ್ಯಾರ್ಥಿ­ಗಳು 90 ಕೇಂದ್ರಗಳಲ್ಲಿ ಪರೀಕ್ಷೆ ಬರೆಯು­ವರು. ಪರೀಕ್ಷೆ ನಿಗದಿತ ದಿನದಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12.45ರ ವೆರೆಗೆ ನಡೆಯಲಿದೆ.

ಬೀದರ್‌ ತಾಲ್ಲೂಕಿನಲ್ಲಿ 29, ಭಾಲ್ಕಿ ತಾಲ್ಲೂಕಿನಲ್ಲಿ 17, ಹುಮನಾಬಾದ್‌ ತಾಲ್ಲೂಕಿನಲ್ಲಿ 16, ಬಸವ ಕಲ್ಯಾಣ ಹಾಗೂ ಔರಾದ್‌ ತಾಲ್ಲೂಕಿ­ನಲ್ಲಿ ತಲಾ 14 ಪರೀಕ್ಷಾ ಕೇಂದ್ರಗಳಿವೆ ಎಂದು ಪರೀಕ್ಷೆಯ ನೋಡೆಲ್‌ ಅಧಿಕಾರಿ ನಾಮದೇವ್‌ ಸಿಂಗಾರೆ ತಿಳಿಸಿದ್ದಾರೆ.

ಪರೀಕ್ಷೆಗೆ ನೋಂದಾಯಿಸಿದ್ದ ಒಟ್ಟು 26,168 ವಿದ್ಯಾರ್ಥಿಗಳ ಪೈಕಿ 23,273 ಅಭ್ಯರ್ಥಿಗಳು ಹೊಸ­ದಾಗಿ ಪರೀಕ್ಷೆ ಬರೆಯಲಿದ್ದಾರೆ. ಇವರಲ್ಲಿ 11,044 ಬಾಲಕಿಯರು ಇದ್ದಾರೆ. ಒಟ್ಟು ವಿದ್ಯಾರ್ಥಿಗಳಲ್ಲಿ 2,652 ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ 243 ಖಾಸಗಿ ಅಭ್ಯರ್ಥಿಗಳು ಸೇರಿದ್ದಾರೆ.

ಪ್ರಸಕ್ತ ಸಾಲಿನ ಪರೀಕ್ಷೆ ಬರೆಯುವ ಒಟ್ಟು ಪರೀಕ್ಷಾರ್ಥಿಗಳ ಪೈಕಿ ಬೀದರ್ ತಾಲ್ಲೂಕಿನ 8,404, ಹುಮನಾಬಾದ್‌ ತಾಲ್ಲೂಕಿನ 5,174, ಬಸವ­ಕಲ್ಯಾಣ ತಾಲ್ಲೂಕಿನ 5,044, ಭಾಲ್ಕಿ ತಾಲ್ಲೂಕಿನ 4,177 ಹಾಗೂ ಔರಾದ್‌ ತಾಲ್ಲೂಕಿನ 3,369 ಪರೀಕ್ಷಾರ್ಥಿಗಳು ಇದ್ದಾರೆ ಎಂದು ಹೇಳಿದ್ದಾರೆ.

ನಕಲು ತಡೆಯಲು ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾಮಟ್ಟದಲ್ಲಿ ಐದು ಸಂಚಾರ ಜಾಗೃತದಳ ತಂಡ ರಚಿಸಲಿದೆ. ಪ್ರತಿ ತಂಡದಲ್ಲಿ ಮೂವರು ಅಧಿಕಾರಿ­ಗಳಿರುತ್ತಾರೆ. ಪ್ರತಿಯೊಂದು ಕೇಂದ್ರದಲ್ಲೂ ‘ಸ್ಥಾನಿಕ ಜಾಗೃತ ದಳ’ ಹಾಗೂ ಮಹಿಳಾ ಮೇಲ್ವಿಚಾರಕರನ್ನು ನೇಮಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ತಾಲ್ಲೂಕು ಮಟ್ಟದ ಮಾರ್ಗ ಅಧಿಕಾರಿಗಳು ಆಯಾ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಸರಬರಾಜು ಮಾಡಿದ ಬಳಿಕ ಅವರೂ ಜಾಗೃತದಳ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಖಾಸಗಿ ಅಭ್ಯರ್ಥಿಗಳಿಗಾಗಿ ಪರೀಕ್ಷೆ ನಡೆಯುವ ಕೇಂದ್ರಗಳಿಗೆ ಹೆಚ್ಚಿನ ನಿಗಾ ವಹಿಸಲಾಗುತ್ತದೆ.

ಫಲಿತಾಂಶ ಸುಧಾರಣೆಗೆ ದತ್ತು ಯೋಜನೆ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಸುಧಾರಿಸಲು ಪ್ರೌಢಶಾಲೆಗಳಲ್ಲಿ ‘ದತ್ತು ಯೋಜನೆ’ ಕಾರ್ಯಕ್ರಮ ನಡೆಸಲಾಗುತ್ತಿದೆ.

ದತ್ತು ಯೋಜನೆಯಡಿ ಶಾಲೆಯ ವಿದ್ಯಾರ್ಥಿಗಳ ಪೈಕಿ ಆರು ವಿದ್ಯಾರ್ಥಿಗಳ ಗುಂಪು ರಚಿಸಿ, ಶಾಲೆಯ ಪ್ರತಿ ಶಿಕ್ಷಕರಿಗೆ ಒಂದು ಗುಂಪಿನ ಹೊಣೆ ವಹಿಸಿದ್ದು, ವಿದ್ಯಾರ್ಥಗಳ ಪರೀಕ್ಷಾ ಸಿದ್ಧತೆ ಕುರಿತು ಪರಿಶೀಲನೆ ನಡೆಯಲಿದೆ. ಪರೀಕ್ಷೆ ತಯಾರಿ ಕುರಿತು ವಿದ್ಯಾರ್ಥಿಗೆ ಮಾರ್ಗದರ್ಶನವನ್ನು ಈ ಶಿಕ್ಷಕರು ನೀಡುವರು ಎಂದರು.

ಇಷ್ಟೇ ಅಲ್ಲದೇ ಪ್ರೌಢಶಾಲೆಗಳ ಮುಖ್ಯಶಿಕ್ಷಕರು, ವಿಜ್ಞಾನ, ಇಂಗ್ಲಿಷ್‌ ವಿಷಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಾಗಾರವನ್ನು ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.