ADVERTISEMENT

ನೀರಿನ ಒಪ್ಪಂದ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2011, 8:15 IST
Last Updated 27 ಫೆಬ್ರುವರಿ 2011, 8:15 IST

ಬೀದರ್: ನೀರಿಗೆ ಸಂಬಂಧಿಸಿದಂತೆ ವಿದೇಶಿ ಕಂಪೆನಿ ಹಾಗೂ ಸರ್ಕಾರಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕದಂತೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟವು ನಗರದಲ್ಲಿ ಶುಕ್ರವಾರ ‘ನೀರಿನ ಹಕ್ಕಿಗಾಗಿ ಜನಾಂದೋಲನ’ ಹೆಸರಿನಲ್ಲಿ ಪ್ರತಿಭಟನೆ ನಡೆಸಿತು. ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಲಾಯಿತು.

ಅಮೆರಿಕದ ಖಾಸಗಿ ಕಂಪೆನಿಗಳಿಗೆ ದೇಶದ ನೀರಿನ ಮೇಲೆ ಒಡೆತನಕ್ಕೆ ಅವಕಾಶ ಮಾಡಿಕೊಡಲು ಮುಂದಾಗಿರುವುದು ಸರಿಯಲ್ಲ ಎಂದು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಆಪಾದಿಸಿದ್ದಾರೆ. ನೀರಿನ ವ್ಯಾಪಾರಕ್ಕಾಗಿ ಬಂದಿರುವ ಅಮೆರಿಕದ ನಿಯೋಗದೊಂದಿಗೆ ಯಾವುದೇ ಕಾರಣಕ್ಕೂ ಒಪ್ಪಂದ ಮಾಡಿಕೊಳ್ಳಬಾರದು ಎಂದು ಒತ್ತಾಯಿಸಿದ್ದಾರೆ.

ವಿಯೋಲಿಯ ಮತ್ತು ಜೆಸ್ಕೋ ಕಂಪೆನಿ ಜೊತೆಗೆ ಮಾಡಿಕೊಂಡಿರುವ ಒಪ್ಪಂದವನ್ನು ರದ್ದುಪಡಿಸಬೇಕು. ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಹಾಗೂ ಮೈಸೂರು ನಗರಗಳಿಗೆ ಜಲ ಮಂಡಳಿ ಸಹಭಾಗಿತ್ವದೊಂದಿಗೆ ನೀರು ಪೂರೈಸಬೇಕು. ಹಳ್ಳಿ ಮತ್ತು ನಗರಗಳಲ್ಲಿ ಪ್ರಸ್ತುತ ಶೇ. 70 ರಷ್ಟು ಜನ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.ಹೀಗಾಗಿ ಕೂಡಲೇ ಎಲ್ಲರಿಗೂ ಸಮಾನವಾಗಿ ನೀರು ಸಿಗುವಂತೆ ವ್ಯವಸ್ಥೆ ಮಾಡಬೇಕು. ಕರ್ನಾಟಕ ಸರ್ಕಾರದ 2003 ರ ನೀರಿನ ನೀತಿಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಸಂಘಟನೆಯ ಸಂಚಾಲಕ ಮಾರುತಿ ಬಿ. ಕಂಠೆ, ಸಹ ಸಂಚಾಲಕ ಸಂತೋಷಕುಮಾರ ಜೊಳದಾಪಕೆ, ಪ್ರಮುಖರಾದ ದಯಾನಂದ ಸ್ವಾಮಿ, ಪ್ರಭು ಶಿವರಾಮ, ಲಕ್ಷ್ಮಣ ಮಾಧವ, ರಮೇಶ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.