ADVERTISEMENT

ನೀರು: ಗ್ರಾಮಸ್ಥರಿಂದ ಧರಣಿ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2013, 8:05 IST
Last Updated 12 ಏಪ್ರಿಲ್ 2013, 8:05 IST
ಬಸವಕಲ್ಯಾಣದ ಪಂಚಾಯತ್‌ರಾಜ್ ಎಂಜಿನಿಯರಿಂಗ್ ಉಪ ವಿಭಾಗ ಕಚೇರಿ ಎದುರು ಬುಧವಾರ ದಾಸರವಾಡಿ ಗ್ರಾಮಸ್ಥರು ನೀರಿನ ವ್ಯವಸ್ಥೆಗೆ ಆಗ್ರಹಿಸಿ ಧರಣಿ ನಡೆಸಿದರು
ಬಸವಕಲ್ಯಾಣದ ಪಂಚಾಯತ್‌ರಾಜ್ ಎಂಜಿನಿಯರಿಂಗ್ ಉಪ ವಿಭಾಗ ಕಚೇರಿ ಎದುರು ಬುಧವಾರ ದಾಸರವಾಡಿ ಗ್ರಾಮಸ್ಥರು ನೀರಿನ ವ್ಯವಸ್ಥೆಗೆ ಆಗ್ರಹಿಸಿ ಧರಣಿ ನಡೆಸಿದರು   

ಬಸವಕಲ್ಯಾಣ: ತಾಲ್ಲೂಕಿನ ದಾಸರವಾಡಿಯಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಬುಧವಾರ ಗ್ರಾಮಸ್ಥರು ಇಲ್ಲಿನ ಪಂಚಾಯತ್‌ರಾಜ್ ಎಂಜಿನಿಯರಿಂಗ್ ಉಪ ವಿಭಾಗದ ಕಚೇರಿ ಎದುರು ಧರಣಿ ನಡೆಸಿದರು.

ತಮಟೆ ಬಾರಿಸುತ್ತ ಖಾಲಿ ಕೊಡಗಳೊಂದಿಗೆ ಆಗಮಿಸಿದ ಮಹಿಳೆಯರು ಮತ್ತು ಇತರರು `ಬೇಕೇ ಬೇಕು ನೀರು ಬೇಕು, ಸಮಸ್ಯೆ ಬಗೆಹರಿಸದ ಅಧಿಕಾರಿಗಳಿಗೆ ಧಿಕ್ಕಾರ' ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು. ಸುಮಾರು 1500 ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ಎರಡು ತಿಂಗಳಿಂದ ಕುಡಿಯುವ ನೀರಿಗಾಗಿ ಪರದಾಡಬೇಕಾಗುತ್ತಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ನೀರು ಸರಬರಾಜು ಯೋಜನೆಯ ಕೊಳವೆ ಬಾವಿಗೆ ನೀರಿಲ್ಲದೆ ನಳಕ್ಕೆ ನೀರು ಬರುತ್ತಿಲ್ಲ. ಆದ್ದರಿಂದ ದೂರದ ಹೊಲಗಳಲ್ಲಿನ ಬಾವಿಗಳಿಂದ ಬಿಸಿಲಲ್ಲಿಯೇ ಕೊಡಗಳನ್ನು ತಲೆಮೇಲೆ ಹೊತ್ತುಕೊಂಡು ನೀರು ತರಬೇಕಾಗುತ್ತಿದೆ. ಈ ವಿಷಯ ಸಾಕಷ್ಟು ಸಲ ಸಂಬಂಧಿತರ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ ಎಂದು ದೂರಿದರು.

ಗ್ರಾಮದ ಸಮೀಪದಲ್ಲಿ ಕೊಳವೆಬಾವಿ ಕೊರೆದರೂ ಇನ್ನುವರೆಗೆ ಪೈಪ್‌ಲೈನ್ ಹಾಕಿಲ್ಲ. ಅಲ್ಲಿಂದ ಪೈಪ್‌ಲೈನ್ ಮಾಡಲು ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ಕೆಲಸಕ್ಕೆ ವಿಳಂಬವಾಗಿದೆ ಎಂದು ಸಂಬಂಧಿತರು ಸಬೂಬು ಹೇಳುತ್ತಿದ್ದಾರೆ. ಸಮಸ್ಯೆ ಬಗೆಹರಿಸುವಲ್ಲಿ ಯಾರೂ ಕಾಳಜಿ ತೋರುತ್ತಿಲ್ಲ. ಹೀಗಾಗಿ ಸಮಸ್ಯೆ ಗಂಭೀರ ರೂಪ ತಾಳಿದೆ ಎಂದರು.

ಅಧಿಕಾರಿಗಳು ಸಮಸ್ಯೆಯನ್ನು ಶೀಘ್ರ ಬಗೆಹರಿಸುವ ಭರವಸೆ ಕೊಡುವವರೆಗೆ ಇಲ್ಲಿಂದ ಹೋಗುವುದಿಲ್ಲ ಎಂದು ಜನರು ಪಟ್ಟು ಹಿಡಿದು ಕುಳಿತಿದ್ದರು. ಸಬ್ ಇನ್‌ಸ್ಪೆಕ್ಟರ್ ಉಮೇಶ ಕಾಂಬಳೆ ಸ್ಥಳಕ್ಕೆ ಆಗಮಿಸಿ ಜನರನ್ನು ಸಮಾಧಾನಗೊಳಿಸಿದರು. ನೀರಿನ ಸಮಸ್ಯೆ ಪರಿಹಾರಕ್ಕೆ ತಕ್ಷಣ ಕ್ರಮ ಕೈಗೊಳ್ಳುವುದಾಗಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ ತಳವಾಡೆ ಹೇಳಿದ್ದರಿಂದ ಧರಣಿ ಅಂತ್ಯಗೊಳಿಸಲಾಯಿತು.

ಗ್ರಾಮಸ್ಥರಾದ ಅಂಬಣ್ಣ ಮಾಮಲೆ, ಪಾಪಣ್ಣ, ತಿಪ್ಪಣ್ಣ ಮಾಮಲೆ, ಕಸ್ತೂರಬಾಯಿ ಹಣಮಂತ, ಶೋಭಾ ಜಗನ್ನಾಥ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.