ADVERTISEMENT

ಪಕ್ಷ ಸೇರ್ಪಡೆಗೆ 31ರಂದು ಸಭೆ: ಖೂಬಾ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 5:27 IST
Last Updated 27 ಮಾರ್ಚ್ 2018, 5:27 IST
ಬಸವಕಲ್ಯಾಣದಲ್ಲಿ ಸೋಮವಾರ ನಡೆದ ಬೆಂಬಲಿಗರ ಸಭೆಯಲ್ಲಿ ಶಾಸಕ ಮಲ್ಲಿಕಾರ್ಜುನ ಖೂಬಾ ಮಾತನಾಡಿದರು
ಬಸವಕಲ್ಯಾಣದಲ್ಲಿ ಸೋಮವಾರ ನಡೆದ ಬೆಂಬಲಿಗರ ಸಭೆಯಲ್ಲಿ ಶಾಸಕ ಮಲ್ಲಿಕಾರ್ಜುನ ಖೂಬಾ ಮಾತನಾಡಿದರು   

ಬಸವಕಲ್ಯಾಣ: ‘ಮಾರ್ಚ್ 31ರಂದು ಇಲ್ಲಿ ಕಾರ್ಯಕರ್ತರ ಸಭೆ ಆಯೋಜಿಸಿ ಯಾವ ಪಕ್ಷಕ್ಕೆ ಸೇರ್ಪಡೆ ಆಗಬೇಕು ಎಂಬುದನ್ನು ನಿರ್ಣಯಿಸಲಾಗುವುದು’ ಎಂದು ಶಾಸಕ ಮಲ್ಲಿಕಾರ್ಜುನ ಖೂಬಾ ಹೇಳಿದರು.

ಇಲ್ಲಿನ ತ್ರಿಪುರಾಂತದಲ್ಲಿನ ಅವರ ನಿವಾಸದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ನಾನು ರಾಜ್ಯಸಭೆ ಚುನಾವಣೆಗೆ ಬೆಂಗಳೂರಿಗೆ ಹೋಗಿದ್ದಾಗ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ರಾಜಕೀಯದ ಬಗ್ಗೆ ಚರ್ಚಿಸಿರುವುದು ನಿಜ. ಹೀಗೆಂದು ನಾನು ಆ ಪಕ್ಷದಲ್ಲಿರುತ್ತೇನೆ ಎಂದಲ್ಲ. ಆದರೂ ಈ ಬಗ್ಗೆ ಊಹಾಪೋಹಗಳು ಎದ್ದಿವೆ. ಈ ಹಿಂದೆ ಹೇಳಿರುವಂತೆ ರಾಷ್ಟ್ರೀಯ ಪಕ್ಷ ಸೇರ್ಪಡೆಯಾಗುವ ಬಯಕೆಯಿದೆ. ಬಿಜೆಪಿಯ ರಾಷ್ಟ್ರೀಯ ಮತ್ತು ರಾಜ್ಯ ನಾಯಕರೊಂದಿಗೆ ಚರ್ಚಿಸಿಯೇ ಆ ಪಕ್ಷಕ್ಕೆ ಹೋಗುವ ನಿರ್ಣಯ ತೆಗೆದುಕೊಂಡಿದ್ದೇನೆ. ಆದರೂ ಈ ಬಗ್ಗೆ ಕಾರ್ಯಕರ್ತರೊಂದಿಗೆ ಇನ್ನೊಮ್ಮೆ ಸಮಾಲೋಚಿಸಿ ಅಂತಿಮ ನಿರ್ಣಯ ತೆಗೆದುಕೊಳ್ಳಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಈ ಸಲ ನನಗೆ ಸಚಿವನಾಗಬೇಕಾ ಗಿದೆ. ಆದ್ದರಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದು ಅತ್ಯಂತ ಅವಶ್ಯಕವಾಗಿದ್ದು ಈ ನಿಟ್ಟಿನಲ್ಲಿ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇನೆ. ಇದು ನನ್ನ 4ನೇ ಚುನಾವಣೆಯಾಗಿದ್ದು ಹೇಗೆ ಗೆಲ್ಲಬೇಕು ಎಂಬುದು ಗೊತ್ತಿದೆ. ನಾನು ಇನ್ನುವರೆಗೆ ಅಧಿಕೃತವಾಗಿ ಜೆಡಿಎಸ್ ಪಕ್ಷ ತೊರೆದಿಲ್ಲ. ಆದರೂ ನಮ್ಮವರೇ ಕೆಲವರು ಆಗಲೇ ಈ ಪಕ್ಷದ ಟಿಕೆಟ್ ಕೇಳಲು ಆರಂಭಿಸಿದ್ದಾರೆ. ಇನ್ನುಳಿದವರಲ್ಲಿಯೂ ಯಾರಿಗಾದರೂ ನನ್ನ ಮೇಲೆ ನಂಬಿಕೆ ಇಲ್ಲದಿದ್ದರೆ ಬೇರೆ ಪಕ್ಷಕ್ಕೆ ಹೋಗಬಹುದು. ನನ್ನೊಂದಿಗೆ ಉಳಿದರೆ ನಾನು ಯಾವ ಪಕ್ಷದಲ್ಲಿದ್ದರೂ ನನ್ನ ಗೆಲುವುಗೆ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕಾಗುತ್ತದೆ’ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕಾಳಿದಾಸ ಜಾಧವ, ಸಂಜೀವ ಗಾಯಕವಾಡ, ಪುಷ್ಪರಾಜ ಹಾರಕೂಡೆ, ಸುಧಾಕರ ಮದನೆ, ಶಿವಕುಮಾರ ಬಿರಾದಾರ, ಪರಮೇಶ್ವರ ಗಿಲ್ಕೆ, ಶಿವಕುಮಾರ ಮಹಾಜನ, ಲಿಂಗರಾಜ ಶಾಶೆಟ್ಟೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.