ಬಸವಕಲ್ಯಾಣ: ಭಾರಿ ಮಳೆ ಆಗುತ್ತಿರುವ ಕಾರಣ ಸಮೀಪದ ಚುಳಕಿನಾಲಾ ಜಲಾಶಯ ಭರ್ತಿಯಾಗುವ ಹಂತಕ್ಕೆ ತಲುಪಿದೆ. `ಜಲಾಶಯದ ಹಿನ್ನೀರು ಧನ್ನೂರ ಸೇತುವೆವರೆಗೆ ತಲುಪಿದ್ದು ಸೇತುವೆ ಮುಳುಗಡೆ ಆಗುವುದಕ್ಕೆ ಒಂದು ಅಡಿ ಮಾತ್ರ ಬಾಕಿ ಇದೆ.
1.93 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 0.849ರಷ್ಟು ನೀರು ಸಂಗ್ರಹಗೊಂಡಿದೆ. ಒಳ ಹರಿವು ಹೆಚ್ಚಾಗಿದ್ದರಿಂದ ಪ್ರತಿದಿನ ನೀರು ಹೆಚ್ಚುತ್ತಲೇ ಇದೆ.
ಜಲಾಶಯ ಸಂಪೂರ್ಣ ಭರ್ತಿಗೆ ಒಂದು ಅಡಿಯಷ್ಟು ನೀರು ತುಂಬುವುದು ಬಾಕಿಯಿದೆ’ ಎಂದು ನೀರಾವರಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಕುಮಾರ ಲಾತೂರೆ ತಿಳಿಸಿದ್ದಾರೆ.
`ನೀರು ಹೆಚ್ಚತ್ತಿರುವ ಕಾರಣ ಧನ್ನೂರ ಸೇತುವೆ ಮುಳುಗಿ ಭಾಲ್ಕಿ ಬಸವಕಲ್ಯಾಣ ರಸ್ತೆಯಲ್ಲಿನ ವಾಹನ ಸಂಚಾರ ನಿಲ್ಲುವ ಸಾಧ್ಯತೆಯಿದೆ. ಆದ್ದರಿಂದ ಯಾವ ಸಮಯದಲ್ಲಾದರೂ ಜಲಾಶಯದ ಕಾಲುವೆಗಳಿಂದ ನೀರು ಹೊರ ಬಿಡುವ ಸಾಧ್ಯತೆಯಿದೆ. ಆದ್ದರಿಂದ ನದಿ ಸಮೀಪದ ಗ್ರಾಮಸ್ಥರು ಜಾಗರೂಕರಾಗಿ ಇರಬೇಕು. ದನಕರುಗಳಿಗೆ ನದಿ ಹತ್ತಿರದಲ್ಲಿ ಬಿಡಬಾರದು’ ಎಂದು ತಿಳಿಸಿದ್ದಾರೆ.
`ತಾಲ್ಲೂಕಿನ ಖೇರ್ಡಾ(ಬಿ) ಹತ್ತಿರದ ಮುಲ್ಲಾಮಾರಿ ಮೇಲ್ದಂಡೆ ಯೋಜನೆಯ ಜಲಾಶಯ ಈಗಾಗಲೇ ಭರ್ತಿಯಾಗಿದೆ. 1 ಟಿಎಂಸಿ ಅಡಿ ಸಾಮರ್ಥ್ಯದ ಈ ಜಲಾಶಯದ ಕೋಡಿಯಿಂದಲೂ ಯಾವ ಸಮಯದಲ್ಲಾದರೂ ನೀರು ಹೊರ ಬಿಡುವ ಸಾಧ್ಯತೆಯಿದೆ’ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.