ADVERTISEMENT

ರಾಷ್ಟ್ರಧರ್ಮವೇ ಶ್ರೇಷ್ಠ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 5:35 IST
Last Updated 16 ಅಕ್ಟೋಬರ್ 2012, 5:35 IST

ಭಾಲ್ಕಿ: ರಾಷ್ಟ್ರಧರ್ಮವೇ ಮಾನವನಿಗೆ ಪರಮ ಶ್ರೇಷ್ಠವಾಗಿದೆ. ಪ್ರತಿಯೊಬ್ಬರಲ್ಲೂ ಮಾತೃ ಭೂಮಿಯ ಬಗ್ಗೆ ಅದಮ್ಯ ಭಕ್ತಿ, ಪ್ರೇಮ ಉಕ್ಕಿ ಹರಿಯಬೇಕು ಎಂದು ಕೊಡಂಬಲ್, ಭಾತಂಬ್ರಾ ಜಗದ್ಗುರು ಶಿವಯೋಗೀಶ್ವರ ಸ್ವಾಮೀಜಿ ನುಡಿದರು.

ಭಾಲ್ಕಿ ತಾಲೂಕಿನ ಭಾತಂಬ್ರಾದಲ್ಲಿ ಆರ್‌ಎಸ್‌ಎಸ್‌ನಿಂದ ಭಾನುವಾರ ಆಯೋಜಿಸಿದ್ದ ಸ್ವಯಂ ಸೇವಕರ  ಪ್ರಾಥಮಿಕ ಶಿಕ್ಷಾ ವರ್ಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು. ಸುಭದ್ರವಾದ ದೇಶ ಉಳಿದರೆ ಮಾತ್ರ ಎಲ್ಲ ಧರ್ಮಗಳು, ಮತ ಪಂಥಗಳು ಉಳಿಯಬಲ್ಲವು. ವಿಚಾರವಂತ ಯುವಶಕ್ತಿ ಬಲಿಷ್ಠ ರಾಷ್ಟ್ರದ ಸಂಪತ್ತಾಗಬೇಕು ಎಂದು ಶ್ರೀಗಳು ತಿಳಿಸಿದರು

ಸಂಘದ ಉತ್ತರ ಕರ್ನಾಟಕ ಪ್ರಾಂತ ಸಹ ಕಾರ್ಯವಾಹಕ ಟಿ. ಪ್ರಸನ್ನ ಮಾತನಾಡಿ, ಆರ್‌ಎಸ್‌ಎಸ್ ಸಂಘಟನೆಯಿಂದ ಇಡೀ ರಾಷ್ಟ್ರದಲ್ಲಿ ಸಧೃಢ ಯುವಪಡೆ ಕಟ್ಟುವ ಕೆಲಸದಲ್ಲಿ ನಿರತವಾಗಿದೆ ಎಂದು ತಿಳಿಸಿದರು.
ಕೆಲವರು ತಮ್ಮ ಸ್ವಾರ್ಥಕ್ಕಾಗಿ ಜಾತಿ, ಮತ, ಪಂಥಗಳ ಹೆಸರಿನಲ್ಲಿ ದೇಶವನ್ನು ಒಡೆಯುವ ದುಷ್ಟ ಶಕ್ತಿಗಳ ಬಗ್ಗೆ ಜನರು ಜಾಗೃತರಾಗಿರಬೇಕು ಎಂದು ಹೇಳಿದರು.

ಅಲ್ಪ ಸಂಖ್ಯಾತರ ಓಲೈಕೆಗಾಗಿ ಒಂದೇ ಮಾತರಂ ಗೀತೆಯನ್ನು ತುಂಡು ಮಾಡಿರುವದು ಸರಿಯಲ್ಲ ಎಂದು ಖಂಡಿಸಿದರು. ನಿವೃತ್ತ ಶಿಕ್ಷಕ ಕಂಟೆಪ್ಪ ದಾಡಗೆ ಅಧ್ಯಕ್ಷತೆ ವಹಿಸಿದ್ದರು.

ಪಥಸಂಚಲನ:
ಇದೇ ಸಂದರ್ಭದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ನೂರಾರು ಸ್ವಯಂ ಸೇವಕರ ಆಕರ್ಷಕ ಪಥ ಸಂಚಲನ ಮತ್ತು ಕವಾಯತು ನಡೆಯಿತು. ಮಾಜಿ ಶಾಸಕ ಪ್ರಕಾಶ ಖಂಡ್ರೆ, ಜಿಪಂ ನಿಕಟಪೂರ್ವ ಅಧ್ಯಕ್ಷ ಬಾಬುರಾವ ಕಾರಬಾರಿ, ಶಿವಲಿಂಗ ಕುಂಬಾರ, ಮಹೇಶ ರಾಚೊಟ್ಟೆ ಮುಂತಾದವರು ಇದ್ದರು.
ರಮೇಶ ಪಾಂಚಾಳ ಸ್ವಾಗತಿಸಿದರು. ಶರಣು ಪಾಟೀಲ ನಿರ್ವಹಿಸಿದರು. ಶಿವಪುತ್ರ ಬಿರಾದಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.