ADVERTISEMENT

ಶ್ರದ್ಧಾಭಕ್ತಿಯೊಂದಿಗೆ ಮೌನೇಶ್ವರ ಜಾತ್ರೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2013, 6:20 IST
Last Updated 19 ಫೆಬ್ರುವರಿ 2013, 6:20 IST
ಮೌನೇಶ್ವರ ಜಾತ್ರೆ ಪ್ರಯುಕ್ತ ಬೀದರ್‌ನಲ್ಲಿ ಭಾನುವಾರ ನಡೆದ ಪಲ್ಲಕ್ಕಿ ಮೆರವಣಿಗೆಯಲ್ಲಿ ಪುರವಂತರ ಕುಣಿತ ಗಮನ ಸೆಳೆಯಿತು
ಮೌನೇಶ್ವರ ಜಾತ್ರೆ ಪ್ರಯುಕ್ತ ಬೀದರ್‌ನಲ್ಲಿ ಭಾನುವಾರ ನಡೆದ ಪಲ್ಲಕ್ಕಿ ಮೆರವಣಿಗೆಯಲ್ಲಿ ಪುರವಂತರ ಕುಣಿತ ಗಮನ ಸೆಳೆಯಿತು   

ಬೀದರ್: ಮೌನೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ನಗರದಲ್ಲಿ ಭಾನುವಾರ ಭಕ್ತಿ,ಶ್ರದ್ಧೆಯೊಂದಿಗೆ ಪಲ್ಲಕ್ಕಿ ಮೆರವಣಿಗೆ ನಡೆಯಿತು.

ನಗರದ ದೇವಿ ಕಾಲೋನಿಯ ಕಾಳಿಕಾದೇವಿ ಮಂದಿರದಿಂದ ಆರಂಭಗೊಂಡ ಮೆರವಣಿಗೆಯು ಮಡಿವಾಳ ವೃತ್ತ, ಸರ್ವಿಸ್ ಸ್ಟ್ಯಾಂಡ್, ಅಂಬೇಡ್ಕರ್ ವೃತ್ತ, ಮಹಾವೀರ ವೃತ್ತ, ಬಸವೇಶ್ವರ ವೃತ್ತ, ಬೊಮ್ಮಗೊಂಡೇಶ್ವರ ವೃತ್ತ, ರಾಮಚೌಕ್, ಬಿ.ಬಿ.ಬಿ. ಕಾಲೇಜು, ಸಿದ್ಧಾರೂಢ ಮಠದ ಮೂಲಕ ಹಾಯ್ದು ಮೌನೇಶ್ವರ ಮಂದಿರದಲ್ಲಿ ಸಮಾರೋಪಗೊಂಡಿತು.

ಅಲಂಕೃತ ವಾಹನದಲ್ಲಿ ಮೌನೇಶ್ವರರ ಭಾವಚಿತ್ರ ಇರಿಸಲಾಗಿತ್ತು.ಕಳಶ ಹೊತ್ತ ಮಹಿಳೆಯರು ಮೆರವಣಿಗೆಗೆ ಮೆರಗು ತಂದುಕೊಟ್ಟರು. ವೇಷಧಾರಿ ವ್ಯಕ್ತಿ ಸಾರ್ವಜನಿಕರ ಚಿತ್ತ ತಮ್ಮತ್ತ ಸೆಳೆದರು. ಪುರವಂತರ ಕುಣಿತ ವಿಶೇಷ ಆಕರ್ಷಣೆ ಆಗಿತ್ತು. ಇನ್ನು ಹಾಡುಗಳ ಮೇಲೆ ಯುವಕರು ಕುಣಿದು ಕುಪ್ಪಳಿಸಿದರು.

ಸಮಾಜದ ಪ್ರಮುಖರಾದ ಬಾಬುರಾವ್ ವಿಶ್ವಕರ್ಮ, ಪ್ರಭು ವಿಶ್ವಕರ್ಮ ಮಂಗಲಗಿ, ಅಣ್ಣೆಪ್ಪ ವಿಶ್ವಕರ್ಮ, ತುಕಾರಾಮ ವಿಶ್ವಕರ್ಮ ಮತ್ತಿತರರು ವೆುರವಣಿಗೆಯಲ್ಲಿ ಪಾಲ್ಗೊಂಡಿದ್ದರು.ಜಾತ್ರೆ ನಿಮಿತ್ತ ದೇವಸ್ಥಾನದ ಪರಿಸರದಲ್ಲಿ ಭಕ್ತಿಮಯ ವಾತಾವರಣ ಕಂಡು ಬಂದಿತು. ಕಾಯಿ, ಕರ್ಪೂರ, ಬೆಂಡು, ಬತಾಸೆ, ಕುಂಕುಮ, ಮಕ್ಕಳ ಆಟಿಕೆ ಮತ್ತಿತರ ಅಂಗಡಿಗಳು ತಲೆ ಎತ್ತಿದ್ದವು. ಪಾಲಕರು ಮಕ್ಕಳಿಗಾಗಿ ಆಟಿಕೆಗಳನ್ನು ಖರೀದಿಸುತ್ತಿದ್ದದೃಶ್ಯ ಸಾಮಾನ್ಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.