ADVERTISEMENT

ಸಹಕಾರ ತತ್ವದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2012, 9:00 IST
Last Updated 12 ಜುಲೈ 2012, 9:00 IST

 ಬೀದರ್: ನಗರ ಹೊರವಲಯದ ಲಾಲಬಾಗ ಬಳಿ ಸಾರ್ವಜನಿಕ ಷೇರು ಸಂಗ್ರಹಣೆ, ಸಹಕಾರಿ ತತ್ವದಡಿ ಸೂಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆ ನಿರ್ಮಿಸಲು ಉದ್ದೇಶಿಸಿದ್ದು, ಆಸಕ್ತ ಸಾರ್ವಜನಿಕರು, ಸಂಸ್ಥೆಗಳು ಷೇರುಗಳನ್ನು ಖರೀದಿಸಬಹುದು ಎಂದು ಮಾಜಿ ಸಚಿವ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಅಧ್ಯಕ್ಷ ಗುರುಪಾದಪ್ಪ ನಾಗಮಾರಪಳ್ಳಿ ತಿಳಿಸಿದರು.

`ಉದ್ದೇಶಿತ `ಗುರುಪಾದಪ್ಪಾ ನಾಗಮಾರಪಳ್ಳಿ ಸೂಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆ~ಗೆ ಇದೇ ವರ್ಷದ ನವೆಂಬರ್ 11ರಂದು ಶಂಕುಸ್ಥಾಪನೆ ನೆರವೇರಿಸಲಿದ್ದು, ಎರಡು ವರ್ಷದಲ್ಲಿ ನಿರ್ಮಾಣ ಪೂರ್ಣಗೊಳಿಸುವ ಗುರಿಯಿದೆ~ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಒಟ್ಟಾರೆ 100 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣವಾಗಲಿದ್ದು, ಎಲ್ಲ ರೀತಿಯ ಅನಾರೋಗ್ಯ ಸಮಸ್ಯೆಗಳಿಗೆ ಹೈಟೆಕ್ ಚಿಕಿತ್ಸೆ, ಸೌಲಭ್ಯ ಒದಗಿಸುವುದು ಉದ್ದೇಶ. ಷೇರುದಾರರಿಗೆ ಚಿಕಿತ್ಸೆಯಲ್ಲಿ ಶೇ 20ರಷ್ಟು ರಿಯಾಯಿತಿ ಸೌಲಭ್ಯವೂ ಲಭ್ಯವಿರುತ್ತದೆ ಎಂದರು.
ಷೇರು ಬಂಡವಾಳವಾಗಿ ಒಟ್ಟಾರೆ 25 ಕೋಟಿ ರೂಪಾಯಿ ಸಂಗ್ರಹಿಸುವ ಗುರಿ ಇದೆ.
 
ಷೇರು ಮೌಲ್ಯ ಪ್ರತಿ ಷೇರಿಗೆ ರೂ. 10 ಸಾವಿರ ಇದ್ದು, ಪ್ರತಿಯೊಬ್ಬರು ಕನಿಷ್ಠ ಐದು ಷೇರುಗಳನ್ನು, ಅಂದರೆ ಒಂದು ಲಕ್ಷ ರೂಪಾಯಿ ನೀಡಿ ಷೇರು ಖರೀದಿಸಬೇಕು ಎಂಬುದು ನಿಬಂಧನೆ ಎಂದರು. ಈಗಾಗಲೇ ಒಟ್ಟಾರೆ ರೂ. 4.5 ಕೋಟಿ ಷೇರು ಧನವಾಗಿ ಸಂಗ್ರಹಿಸಲಾಗಿದೆ. ಸಾಲ ಪಡೆಯುವುದಕ್ಕಿಂತಲೂ ಹೆಚ್ಚಾಗಿ, ಗುಣಮಟ್ಟದ ಸೇವೆಯು ಕಡಿಮೆ ವೆಚ್ಚದಲ್ಲಿ ಈ ಭಾಗದ ಜನರಿಗೆ ಲಭ್ಯವಾಗಬೇಕು ಎಂಬ ಹಿನ್ನೆಲೆಯಲ್ಲಿ ಷೇರು ಮತ್ತು ದಾನಿಗಳಿಂದ ಸಂಪನ್ಮೂಲ ಕ್ರೋಡೀಕರಿಸುವ ಉದ್ದೇಶವಿದೆ ಎಂದರು. ರೂ. 10 ಲಕ್ಷದವರೆಗೆ ದಾನ ನೀಡುವವರ ಹೆಸರನ್ನು ಆಸ್ಪತ್ರೆಯ ವಿವಿಧ ಕೊಠಡಿಗಳು, ಸ್ಥಳಗಳಿಗೆ ಇಡಲಿದ್ದು, ಶಾಶ್ವತವಾಗಿ ಹೆಸರು ಉಳಿಸಲು ಒತ್ತು ನೀಡಲಾಗುವುದು. ಅಲ್ಲದೆ, ದಾನಿಗಳು ಅಥವಾ ಅವರ ಕುಟುಂಬ ಸದಸ್ಯರು ಅನಾರೋಗ್ಯ ಪೀಡಿತರಾದಲ್ಲಿ ವರ್ಷದಲ್ಲಿ ಒಂದು ತಿಂಗಳು ಉಚಿತವಾಗಿ ಆರೋಗ್ಯ ಸೇವೆ ಒದಗಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.