ಔರಾದ್: ಸುಶಿಕ್ಷಿತರಿಂದ ಸಮಾಜದ ಬದಲಾವಣೆ ನಿರೀಕ್ಷಿಸಬಹುದಾಗಿದೆ. ಈ ನಿಟ್ಟಿನಲ್ಲಿ ಸವಿತಾ ಸಮಾಜ ಬಾಂಧವರು ಗಂಭೀರವಾಗಿ ಚಿಂತನೆ ನಡೆಸಬೇಕಾಗಿದೆ ಎಂದು ಲಾತೂರ ಜೀವಸೇನಾ ಅಧ್ಯಕ್ಷ ಸಂಜಯ್ ಸಲಹೆ ನೀಡಿದರು.
ತಾಲ್ಲೂಕು ಸವಿತಾ ಸಮಾಜದ ಆಶ್ರಯದಲ್ಲಿ ಮಂಗಳವಾರ ಇಲ್ಲಿಯ ದತ್ತ ಮಂದಿರ ಪರಿಸರದಲ್ಲಿ ನಡೆದ ಸಂತ ಸೇನಾ ಮಹಾರಾಜರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಲ್ಲಲ್ಲಿ ಹರಿದು ಹಂಚಿಹೋದ ಸವಿತಾ ಸಮಾಜ ಬಾಂಧವರು ಆರ್ಥಿಕವಾಗಿ ತೀರಾ ಹಿಂದುಳಿದಿದ್ದಾರೆ. ಈ ಕಾರಣ ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗದೆ ತಮ್ಮ ಸಾಂಪ್ರಾದಾಯಿಕ ಕಸಬು ಮಾಡಿಕೊಂಡು ಜೀವಿಸುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಪ್ರಭು ಚವ್ಹಾಣ್, ತಾಲ್ಲೂಕಿನ ಅಭಿವೃದ್ಧಿ ನನ್ನ ಏಕೈಕ ಗುರಿಯಾಗಿದೆ. ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ನಾನು ಮಾಡಿದ ಕೆಲಸ ಜನರಿಗೆ ತೃಪ್ತಿ ತಂದಿದೆ ಎಂದು ಭಾವಿಸಿಕೊಂಡಿದ್ದೇನೆ. ಸವಿತಾ ಸಮಾಜ ಬಾಂಧವರಿಗೆ ಭವನ ಕಟ್ಟಿಕೊಡಲಾಗುವುದು ಎಂದು ಈ ವೇಳೆ ಭರವಸೆ ನೀಡಿದರು.
ಉಪನ್ಯಾಸಕ ಶರಣಪ್ಪ ಬಿರಾದಾರ, ಶಿವಾಜಿರಾವ ಪಾಟೀಲ ಮುಂಗನಾಳ ಮಾತನಾಡಿದರು. ಪಟ್ಟಣ ಪಂಚಾಯ್ತಿ ಅಧ್ಯಕ್ಷ ಧೊಂಡಿಬಾ ನರೋಟೆ ಅಧ್ಯಕ್ಷತೆ ವಹಿಸಿದರು. ಮೆಹಕರ್ ಮಹಾರಾಜ, ಬಸವರಾಜ ದೇಶಮುಖ, ಕೇರಬಾ ಪವಾರ, ರಹೀಮ್ಸಾಬ್, ಕುಮಾರ ದೇಸಾಯಿ, ಮುಕ್ತೆ ಶ್ರೀಮಂಗಲೆ, ಬಂಡೆಪ್ಪ ಕೋಟೆ, ಬಸವರಾಜ ಸೇರಿದಂತೆ ವಿವಿಧ ಸಮಾಜ ಧುರೀಣರು ಉಪಸ್ಥಿತರಿದ್ದರು. ಜೀತಪ್ಪ ಮುಸ್ತಾಪುರೆ ಸ್ವಾಗತಿಸಿ ನಿರೂಪಿಸಿದರು. ಬಾಲಾಜಿ ವಂದಿಸಿದರು. ಪಲ್ಲವಿ, ಪ್ರೀಯಾಂಕಾ ಪ್ರಾರ್ಥನೆ ಗೀತೆ ಹಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.