ADVERTISEMENT

ಹಿರಿಯ ಸಾಹಿತಿ ಪ್ರೊ. ಸಿಂಪಿಗೆ ಆಪ್ತ ಸನ್ಮಾನ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 8:00 IST
Last Updated 15 ಅಕ್ಟೋಬರ್ 2012, 8:00 IST

ಬೀದರ್: ಸಾಹಿತಿಗಳು ಎನಿಸಿಕೊಂಡವರು ಆತ್ಮೀಯ ಮಾತುಕತೆ, ಸಜ್ಜನಿಕೆಯ ನಡವಳಿಕೆಯನ್ನು ಕಾಯ್ದುಕೊಳ್ಳುವುದು ಅಗತ್ಯ. ಇಂಥದನ್ನು ಇಷ್ಟರವರೆಗೂ ಕಾಪಾಡಿಕೊಂಡಿದ್ದಾರೆ ಎಂಬ ಕಾರಣಕ್ಕೇ ಹಿರಿಯರಾದ ಪ್ರೊ.ಸಿಂಪಿ ಆಪ್ತರಾಗುತ್ತಾರೆ ಎಂದು ಸಾಹಿತಿ ಶಶಿಕಲಾ ವಸ್ತ್ರದ ಅಭಿಪ್ರಾಯಪಟ್ಟರು.

ಬೀದರ್‌ನ ಕುವೆಂಪು ಕನ್ನಡ ಸಂಘವು ಹಿರಿಯ ಸಾಹಿತಿ ಪ್ರೊ. ವೀರೇಂದ್ರ ಸಿಂಪಿ ಅವರಿಗೆ ಅವರ 75ನೇ ಜನ್ಮದಿನ ಸಂದರ್ಭದಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಎಲ್ಲರ ನಡುವೆಯೂ ಆಪ್ತ ಸಂಬಂಧದ ಕೊಂಡಿ ಇರುತ್ತದೆ. ಅವುಗಳನ್ನುಗುರುತಿಸುವುದು ಮುಖ್ಯ. ಸಿಂಪಿ ಅವರನ್ನು 75ನೇ ಜನ್ಮದಿನದ ನೆಪದಲ್ಲಿ ಸನ್ಮಾನಿಸುತ್ತಿರುವುದು ಶ್ಲಾಘನೀಯ~ ಎಂದು ಸಂಘಟಕರನ್ನು  ಅಭಿನಂದಿಸಿದರು.

`ಕೈ ಸ್ವಾದೀನದಲ್ಲಿ ಇಲ್ಲ ಎಂಬ ನೋವು ಸಿಂಪಿ ಅವರನ್ನು ಕಾಡುತ್ತಿದೆ ಎಂಬುದನ್ನು ಉಲ್ಲೇಖಿಸಿದ ವಸ್ತ್ರದ, ಇದೇ ಕಾರಣಕ್ಕಾಗಿ ವಿಷಾದ ಪಡುವುದು ಬೇಡ. ಅದು ಅಂಗವೈಕಲ್ಯವಲ್ಲ.  ಹೃದಯವೇ ಇಲ್ಲದ ಎಷ್ಟೋ ಮಂದಿ ಇದ್ದಾರೆ. ಹೃದಯಹೀನರಾಗಿ ಇರುವುದು  ಅಂಗವೈಕಲ್ಯತೆ.  ಕಿರಿಯರಿಗೆ ಮಾರ್ಗದರ್ಶಕರಾಗಿರುವ ಸಿಂಪಿ ಇನ್ನಷ್ಟು ಉತ್ಸಾಹಿಗಳಾಗಿರಲಿ~ ಎಂದರು.

`60ರ ನಂತರದ್ದು ಮನಸ್ಸು, ಬದುಕು ಮತ್ತೆ ಅರಳುವ ವಯಸ್ಸು. ಸೌಂದರ್ಯ ಇರುವುದು ವ್ಯಕ್ತಿಯ ಸಾಮಾಜಿಕ ಕಳಕಳಿ, ವ್ಯಕ್ತಿತ್ವ ಮತ್ತು ಅವರು ತೋರುವ ಶ್ರಮದಲ್ಲಿ ಎಂಬುದನ್ನು ಮರೆಯಬಾರದು~ ಎಂದು ವ್ಯಾಖ್ಯಾನಿಸಿದರು.

ಅಭಿನಂದನಾ ನುಡಿ ಮಾಡಿದ ಗುಲ್ಬರ್ಗದ ಪ್ರೊ. ಸೂಗಯ್ಯ ಹಿರೇಮಠ ಅವರು, ಪ್ರೊ. ವೀರೇಂದ್ರ ಸಿಂಪಿ ಅವರು ನಾಡು ಕಂಡು ಅತ್ಯುತ್ತಮ ಪ್ರಬಂಧಕಾರರಲ್ಲಿ ಒಬ್ಬರು. ತಮ್ಮ ಕೃತಿಗಳಲ್ಲಿ ಬೀದರ್‌ನ ಜನಜೀವನ, ಘಟನೆಗಳನ್ನು ಉತ್ತಮವಾಗಿ ಕಟ್ಟಿಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ಪ್ರೊ. ವೀರೇಂದ್ರ ಸಿಂಪಿ ಅವರಿಗೆ ಸಾಹಿತ್ಯ ಕೃತಿಗಳಿಂದ ತುಲಾಭಾರ ನೆರವೇರಿಸಲಾಯಿತು. ಭಾಲ್ಕಿ ಮಠದ ಡಾ. ಬಸವಲಿಂಗ ಪಟ್ಟದ್ದೇವರು ಅವರು ಸಾನಿಧ್ಯ ವಹಿಸಿದ್ದರು.
ಸಾಹಿತಿ ಸೂಗಯ್ಯ ಹಿರೇಮಠ, ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷ ಶರಣಪ್ಪ ಮಿಠಾರೆ, ಶ್ರೀಮತಿ ವೀರೇಂದ್ರ ಸಿಂಪಿ ಮತ್ತುಕುವೆಂಪು ಕನ್ನಡ ಸಂಘದ ಅಧ್ಯಕ್ಷಪಂಚಾಕ್ಷರಿ ಪುಣ್ಯಶೆಟ್ಟಿ ಅವರು ವೇದಿಕೆಯಲ್ಲಿದ್ದರು. ಕುವೆಂಪು ಕನ್ನಡ ಸಂಘದ ಕಾರ್ಯಾಧ್ಯಕ್ಷ ಸುರೇಶ್ ಚನಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಡಾ. ಬಸವರಾಜ ಬಲ್ಲೂರು  ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.