ADVERTISEMENT

‘ಮಾ.26ರಿಂದ ರಾಷ್ಟ್ರೀಯ ಜನಪದ ಸಾಹಿತ್ಯ ಸಮ್ಮೇಳನ’

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2014, 8:51 IST
Last Updated 24 ಮಾರ್ಚ್ 2014, 8:51 IST

ಬೀದರ್: ರಾಷ್ಟ್ರೀಯ ಜನಪದ ಸಾಹಿತ್ಯ ಸಮ್ಮೇಳನ ಮಾ. 26 ರಿಂದ 28ರವರೆಗೆ ನಗರದ ಜಿಲ್ಲಾ ರಂಗ­ಮಂದಿರದಲ್ಲಿ ನಡೆಯಲಿದೆ ಎಂದು  ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಬಸವರಾಜ ಪಾಟೀಲ್ ಅಷ್ಟೂರು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನದ ವಿವರ ನೀಡಿದರು.

ಮಾ. 26 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾ ರಂಗ­ಮಂದಿರದಲ್ಲಿ ಜನಪದ ವಿಶ್ವ­ವಿದ್ಯಾಲಯದ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಅಂದು ಮಧ್ಯಾಹ್ನ 3ಕ್ಕೆ ಜನಪದ ಕಲಾ ತಂಡಗಳ ಪ್ರದರ್ಶನವಿದ್ದು, 24 ಕಲಾ ತಂಡಗಳು ಪ್ರದರ್ಶನ ನೀಡಲಿವೆ ಎಂದು ಹೇಳಿದರು.
ಮಾ.27 ರಂದು ಬೆಳಿಗ್ಗೆ 9 ಗಂಟೆಗೆ ಬೀದರ್ ಜಿಲ್ಲೆಯ ಜನಪದ ಕುರಿತ ಮೊದಲ ಗೋಷ್ಠಿ, ಬೆಳಿಗ್ಗೆ 11.30 ಗಂಟೆಗೆ ಹೈದರಾಬಾದ್ ಕರ್ನಾಟಕ ಭಜನೆ ಹಾಡುಗಳು ಕುರಿತ ಎರಡನೇ ಗೋಷ್ಠಿ, ಮಧ್ಯಾಹ್ನ ಭಾರತದ ಜನಪದ ರಂಗಕಲೆಗಳು ಕುರಿತ ಮೂರನೇ ಗೋಷ್ಠಿ ನಡೆಯಲಿದೆ ಎಂದು ತಿಳಿಸಿದರು.

ಮಾ.28 ರಂದು ಬೆಳಿಗ್ಗೆ 9 ಗಂಟೆಗೆ ಜನಪದ ಕಲೆಗಳ ಪರಿಷ್ಕರಣೆ ಅಗತ್ಯತೆ ಕುರಿತ ನಾಲ್ಕನೇ ಗೋಷ್ಠಿ, ಬೆಳಿಗ್ಗೆ 11.30 ಗಂಟೆಗೆ ಕರ್ನಾಟಕ ಜನಪದ ಸಾಹಿತ್ಯ ಸಂಶೋಧನೆ ಕುರಿತ ಐದನೇ ಗೋಷ್ಠಿ ಜರುಗಲಿದೆ. ಮಧ್ಯಾಹ್ನ 3 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಹೇಳಿದರು.

ಸಮ್ಮೇಳನದಲ್ಲಿ ಜನಪದ ಕ್ಷೇತ್ರದಲ್ಲಿ ಸಾಧನೆಗೈದ 26 ಜನರಿಗೆ ಜನಪದ ಕಾರಂಜಿ, ಜನಪದ ದೀಪ್ತಿ, ಜನಪದ ಸಂಜೀವಿನಿ ಹಾಗೂ ಜನಪದ ಜ್ಯೋತಿ ಪ್ರಶಸ್ತಿಗಳನ್ನು ಪ್ರದಾನ ಮಾಡ­ಲಾಗುವುದು ಎಂದು ತಿಳಿಸಿದರು.

ರಾಷ್ಟ್ರೀಯ ಜನಪದ ಸಾಹಿತ್ಯ ಸಮ್ಮೇಳನದ ಸಂಚಾಲಕ ಡಾ. ಜಗನ್ನಾಥ ಹೆಬ್ಬಾಳೆ, ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಹಣಮಂತಪ್ಪ ಪಾಟೀಲ್, ಕರ್ನಾಟಕ ಕಾಲೇಜು ಪ್ರಾಚಾರ್ಯ ಪ್ರೊ. ಆರ್.ಎಂ. ನಂದಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.