ADVERTISEMENT

‘ಸಿಂಧೋಲ್‌ ಕಾಂಗ್ರೆಸ್ಸಿಗರೇ ಅಲ್ಲ’

ಯಾರದೋ ಕೈಗೊಂಬೆಯಾಗಿ ಮಾಜಿ ಶಾಸಕ ವರ್ತನೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2013, 9:52 IST
Last Updated 6 ಡಿಸೆಂಬರ್ 2013, 9:52 IST

ಬೀದರ್‌: ಮಾಜಿ ಶಾಸಕ ಚಂದ್ರಕಾಂತ ಸಿಂಧೋಲ್‌ ಅವರಿಗೂ ಕಾಂಗ್ರೆಸ್‌ ಪಕ್ಷಕ್ಕೂ ಸಂಬಂಧವಿಲ್ಲ. ಪಕ್ಷ ವಿರೋಧಿ ಚಟುವಟಿಕೆಯ ಹಿನ್ನೆಲೆಯಲ್ಲಿ ಅವರನ್ನು 1989ರಲ್ಲಿಯೇ ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. ಆ ಆದೇಶ ಈಗಲೂ ಜಾರಿಯಲ್ಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಘಟಕ ಹೇಳಿದೆ.

ಧರ್ಮಸಿಂಗ್‌ ಅವರಿಗೆ ಲೋಕಸಭೆ ಚುನಾವಣೆ ಟಿಕೆಟ್‌ ನೀಡಬಾರದು ಎಂಬ ಸಿಂಧೋಲ್‌ ಹೇಳಿಕೆಗೆ ಈ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕಾಜಿ ಅರ್ಷದ್‌ ಅಲಿ, ‘ಸಿಂಧೋಲ್‌ ಈಗ ಯಾರದೋ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ. ಹಿಂದೆಯೂ ಹೀಗೇ ವರ್ತಿಸಿರುವ  ಉದಾಹರಣೆಗಳಿವೆ’ ಎಂದು ತಿರುಗೇಟು ನೀಡಿದ್ದಾರೆ.

ಈ ಕುರಿತು ಪತ್ರಿಕೆ ಹೇಳಿಕೆ ನೀಡಿರುವ ಜಿಲ್ಲಾ ಘಟಕದ ಅಧ್ಯಕ್ಷರು,  ಧರ್ಮಸಿಂಗ್‌ ಅವರ ವಿರುದ್ಧ ನೀಡಿರುವ ಹೇಳಿಕೆ ಖಂಡನೀಯ. ಸಿಂಧೋಲ್‌ ತಮ್ಮನ್ನು ಕಾಂಗ್ರೆಸ್‌ ಮುಖಂಡರು ಎಂದು ಹೇಳಿಕೊಳ್ಳುತ್ತಾರೆ. ಆದರೆ, ಅವರಿಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.

ಸಿಂಧೋಲ್‌ ಅವರು 1967ರಲ್ಲಿ ಜನಸಂಘ ಅಭ್ಯರ್ಥಿಯಾಗಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಆಗಿನ ಸಂದರ್ಭದಲ್ಲಿ ಬೀದರ್‌ನಲ್ಲಿ ಹಿಂದೂ–ಮುಸ್ಲಿಂ ಗಲಾಟೆಯೂ ಆಗಿತ್ತು. ಅವರ ಶಾಸಕತ್ವ ಮುಗಿದ ಬಳಿಕ ಕಾಂಗ್ರೆಸ್‌ಗೆ ಸೇರಿದ್ದು, ಕೆಲ ಕಾಲ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆಗಿದ್ದರು ಎಂದರು.

ಹಿರಿಯರಾದ ಸಿಂಧೋಲ್ ಯಾರದೋ ಕೈಗೊಂಬೆಯಾಗಿ ಧರ್ಮಸಿಂಗ್ ಅವರ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ಕಾಂಗ್ರೆಸ್‌ ಕುರಿತು ಹೇಳಿಕೆ ನೀಡುವ ಯಾವುದೇ ಅಧಿಕಾರ ಅವರಿಗಿಲ್ಲ. ಅವರ ಹೇಳಿಕೆ ಕೇವಲ ಜನರನ್ನು ತಪ್ಪುದಾರಿಗೆ ಎಳೆಯುವ ಯತ್ನವಾಗಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.