ಬಸವಕಲ್ಯಾಣ: ಇಲ್ಲಿನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಕಾಳ ಸಂತೆಯಲ್ಲಿ ಮಾರಾಟಕ್ಕೆ ನಾಲ್ಕು ಲಾರಿಗಳಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಒಟ್ಟು 1,200 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಶುಕ್ರವಾರ ಜಪ್ತಿ ಮಾಡಿಕೊಳ್ಳಲಾಗಿದೆ.
ಅಕ್ಕಿಯನ್ನು ಗುರುಮಿಠಕಲ್ದಿಂದ ಗುಜರಾತಗೆ ಒಯ್ಯಲಾಗುತ್ತಿತ್ತು ಎನ್ನಲಾಗಿದ್ದು, ಒಂದೊಂದು ಲಾರಿಯಲ್ಲಿ ₹ 9 ಲಕ್ಷದ 300 ಕ್ವಿಂಟಾಲ್ ಅಕ್ಕಿ ದೊರೆತಿದೆ. ಒಟ್ಟು ₹ 36 ಲಕ್ಷದ ಅಕ್ಕಿ ಹಾಗೂ ನಾಲ್ಕು ಲಾರಿಗಳ ಮೌಲ್ಯ ಒಳಗೊಂಡು ಒಟ್ಟು ₹1.16 ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಿ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ. ನಾಲ್ಕು ಲಾರಿಗಳ ಚಾಲಕರು, ನಿರ್ವಾಹಕರು ಮತ್ತು ಅಕ್ಕಿ ಲೋಡ್ ಮಾಡಲು ಸಹಕರಿಸಿದ ಗುರುಮಿಠಕಲನ ಮಣಿಕಂಠ ರಾಠೋಡ ಮತ್ತು ವಿಜಯ ಪವಾರ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಆಹಾರ ನಿರೀಕ್ಷಕರಾದ ರಾಜೇಂದ್ರಕುಮಾರ ಹಾಗೂ ರಾಮರತನ ದೇಗಲೆ ನೇತೃತ್ವದಲ್ಲಿ ಜಪ್ತಿ ಕಾರ್ಯ ನಡೆದಿದ್ದು ಪೊಲೀಸ್ ಸಿಬ್ಬಂದಿ ಕೂಡ ಈ ಕಾರ್ಯದಲ್ಲಿ ಸಹಕಾರ ನೀಡಿದ್ದಾರೆ. ತಹಶೀಲ್ದಾರ್ ಸಾವಿತ್ರಿ ಸಲಗರ, ಎಸ್ಐ ಗುರು ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.