ಔರಾದ್: ‘ರಾಜಕೀಯ ಪಕ್ಷಗಳು ಹಣ ಬಲ ಇದ್ದವರಿಗೆ ಮಣೆ ಹಾಕುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಹಾಳು ಮಾಡುತ್ತಿದ್ದಾರೆ’ ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಉಮೇಶ ದುಬಲಗುಂಡೆ ಕಳವಳ ವ್ಯಕ್ತಪಡಿದರು. ತಾಲ್ಲೂಕು ಆಡಳಿತ ಶುಕ್ರವಾರ ಇಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
‘ಚುನಾವಣೆಯಲ್ಲಿ ಶ್ರೀಮಂತರಿಗೆ ಟಿಕೆಟ್ ನೀಡಿದರೆ ಬಡವರು ಹೇಗೆ ಮುಂದೆ ಬರಲು ಸಾಧ್ಯ. ವಂಶಪಾರಂ ಪರೆ ರಾಜಕಾರಣ ಪ್ರಜಾಪ್ರಭುತ್ವದ ವಿರೋಧಿಯಾಗಿದೆ. ಸಮಾಜದ ಕಟ್ಟ ಕಡೆ ಮನುಷ್ಯನಿಗೆ ಸಾಮಾಜಿಕ ನ್ಯಾಯ ಸಿಗಬೇಕು ಎಂಬ ಸಂವಿಧಾನದ ಆಶಯ ಗಾಳಿಗೆ ತೂರಲಾಗಿದೆ’ ಎಂದರು.
ಶಾಸಕ ಪ್ರಭು ಚವಾಣ್ ಮಾತನಾಡಿ, ‘ಡಾ. ಅಂಬೇಡ್ಕರ್ ಅವರು ಯಾವುದೇ ಒಂದು ಜಾತಿ ಸಮುದಾಯದ ಸೊತ್ತಲ್ಲ. ಅವರು ದೇಶದ ನೂರು ಕೋಟಿ ಜನರಿಗೆ ಬೇಕಾದವರು’ ಎಂದು ಹೇಳಿದರು.
‘ನಮ್ಮ ತಾಲ್ಲೂಕಿನ ಜನ ಮುಂದೆ ಬರಬೇಕು. ಮಕ್ಕಳು ಅತ್ಯುತ್ತಮ ಶಿಕ್ಷಣ ಪಡೆಯಬೇಕು. ದೇಶದ ದೊಡ್ಡ ಹುದ್ದೆಗಳಲ್ಲಿ ಸೇವೆ ಸಲ್ಲಿಸುವ ಹಿರಿಯ ನಾಗರಿಕರ ಕನಸು ನನಸು ಮಾಡಬೇಕು’ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸವಿತಾ ಪಾಟೀಲ ಮಾತನಾಡಿದರು. ಉಪಾಧ್ಯಕ್ಷ ನೆಹರೂ ಪಾಟೀಲ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ ಮೇತ್ರೆ, ಪ.ಪಂ. ಅಧ್ಯಕ್ಷ ರಾಜಕುಮಾರ ನಿರ್ಮಳೆ, ಜಿಲ್ಲಾ ಪಂಚಾಯಿತಿ ಸದಸ್ಯ ಮಾರುತಿ ಚವಾಣ್, ಸುರೇಖಾ ಭೋಸ್ಲೆ, ಸಿಪಿಐ ರಮೇಶಕುಮಾರ ಮೈಲೂರಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಚವಾಣ್ಶೆಟ್ಟಿ ಇದ್ದರು. ತಹಶೀಲ್ದಾರ್ ಎಂ.ಚಂದ್ರಶೇಖರ ಸ್ವಾಗತಿಸಿದರು. ಶಿಕ್ಷಕ ಶಾಲಿವಾನ ಉದಗೀರೆ ನಿರೂಪಿಸಿದರು. ನಂತರ ವಿವಿಧ ಶಾಲೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.