ADVERTISEMENT

ಹುಲಸೂರ: ‘ಶೋಷಿತರ ಕಲ್ಯಾಣಕ್ಕಾಗಿ ಶ್ರಮಿಸಿದ ಅಂಬೇಡ್ಕರ್’

ಬೌದ್ಧ ಸ್ತೂಪ ನಿರ್ಮಾಣಕ್ಕೆ ಶಿಲಾನ್ಯಾಸ: ಕೇಂದ್ರ ಸಚಿವ ಭಗವಂತ ಖೂಬಾ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2021, 4:43 IST
Last Updated 4 ಅಕ್ಟೋಬರ್ 2021, 4:43 IST
ಹುಲಸೂರ ಪಟ್ಟಣದ ಬುದ್ಧವಿಹಾರದಲ್ಲಿ ಬೌದ್ಧ ಸ್ತೂಪ ನಿರ್ಮಾಣಕ್ಕೆ ಕೇಂದ್ರ ಸಚಿವ ಭಗವಂತ ಖೂಬಾ ಶಿಲಾನ್ಯಾಸ ನೆರವೇರಿಸಿದರು
ಹುಲಸೂರ ಪಟ್ಟಣದ ಬುದ್ಧವಿಹಾರದಲ್ಲಿ ಬೌದ್ಧ ಸ್ತೂಪ ನಿರ್ಮಾಣಕ್ಕೆ ಕೇಂದ್ರ ಸಚಿವ ಭಗವಂತ ಖೂಬಾ ಶಿಲಾನ್ಯಾಸ ನೆರವೇರಿಸಿದರು   

ಹುಲಸೂರ: ಶೋಷಿತ ಸಮುದಾಯಗಳ ಏಳಿಗೆಗಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು. ಅವರ ಸಂದೇಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದರು.

ಪಟ್ಟಣದ ಬುದ್ಧವಿಹಾರದಲ್ಲಿ ಬೌದ್ಧ ಸ್ತೂಪ ನಿರ್ಮಾಣಕ್ಕೆ ಶನಿವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ಅಂಬೇಡ್ಕರ್ ರಚಿಸಿದ ಸಂವಿಧಾನ ಎಲ್ಲ ಸಮುದಾಯಗಳಿಗೆ ಸಮಾನತೆ ನೀಡಿದೆ. ಕೆಲವರು ಅದನ್ನು ತಿದ್ದುವ ಕುರಿತು ಸುಳ್ಳು ಹರಡುವ ಮೂಲಕ ಸಾಮಾಜಿಕ ಸಾಮರಸ್ಯ ಕದಡುತ್ತಿದ್ದಾರೆ. ಎಲ್ಲರ ಹಿತ ಕಾಯುವ ಸಂವಿಧಾನವನ್ನು ತಿದ್ದುವ ಅವಶ್ಯಕತೆಯೆ ಇಲ್ಲ ಎಂದು ತಿಳಿಸಿದರು.

ADVERTISEMENT

ಗುರುಬಸವೇಶ್ವರ ಮಠದ ಶಿವಾನಂದ ಸ್ವಾಮೀಜಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶದ ಬೆನ್ನೆಲುಬು ಆಗಿದ್ದಾರೆ. ಅವರ ವಿಚಾರಧಾರೆಗಳು ಎಲ್ಲರ ಹಿತಚಿಂತನೆಯನ್ನು ಒಳಗೊಂಡಿವೆ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ನಿಗಮದ ಮಾಜಿ ಅಧ್ಯಕ್ಷ ತಾತ್ಯರಾವ್ ಕಾಂಬಳೆ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಅವರು ಮನುಕುಲದ ಒಳಿತಿಗಾಗಿ ಶ್ರಮಿಸಿದ್ದಾರೆ. ಇಂದು ಜಗತ್ತು ಬುದ್ಧನ ಶಾಂತಿ ಸಂದೇಶವನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು.

ಬಸವಣ್ಣ ಅವರನ್ನು ಸರಿಯಾಗಿ ಅರ್ಥೈಸಿಕೊಂಡಿದ್ದರೆ ಸಮಾಜದಲ್ಲಿ ಇಂದು ಜಾತಿ ಪದ್ಧತಿ ಇರುತ್ತಿರಲಿಲ್ಲ. ಶೋಷಣೆ ಮುಕ್ತ ಸಮಾಜ ಕಟ್ಟಲು ಮಹಾತ್ಮರ ಸಂದೇಶಗಳನ್ನು ಪಾಲಿಸಬೇಕು ಎಂದು ತಿಳಿಸಿದರು.

ಪಿಎಚ್‌ಡಿ ಪಡೆದ ಅಶ್ವಿನ ಹಾಗೂ ಉತ್ತಮ ಪ್ರಾಂಶುಪಾಲ ಪ್ರಶಸ್ತಿ ಪಡೆದ ಜೈಶೆನ ಪ್ರಸಾದ ಅವರನ್ನು ಸನ್ಮಾನಿಸಲಾಯಿತು.

ಬಸವಕಲ್ಯಾಣ ಶಾಸಕ ಶರಣು ಸಲಗರ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತಿಯ ಅಧ್ಯಕ್ಷೆ ಶಕುಂತಲಾ ಬಾಲಾಜಿ ಗೌಡಗಾಂವೆ, ವಿಧಾನ ಪರಿಷತ್‌ ಸದಸ್ಯ ವಿಜಯ ಸಿಂಗ್‌, ತಹಶೀಲ್ದಾರ್‌ ಶಿವಾನಂದ ಮೇತ್ರೆ, ತಾಲ್ಲೂಕು ಸಮಜ ಕಲ್ಯಾಣ ಅಧಿಕಾರಿ ಲಿಂಗರಾಜ ಅರಸ, ಕಾಂಗ್ರೆಸ್ ಮುಖಂಡ ಅರ್ಜುನ ಕನಕ, ಮುಖಂಡರಾದ ಮಲ್ಲಪ್ಪ ಧಬಾಲೆ, ಸುಧೀರ ಕಾಡಾದಿ, ಪಿಡಿಒ ಭೀಮಷಪ್ಪ ದಂಡಿನ್‌ ಇದ್ದರು.

ಧರ್ಮೇಂದ್ರ ಭೋಸಲೆ ಸ್ವಾಗತಿಸಿದರು. ಗಂಗಾಧರ ಪೂಜೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.