ಬೀದರ್: ಹವಾ ಮಲ್ಲಿನಾಥರು ಭಕ್ತರನ್ನು ತುಳಿದು ಅಣಕಿಸುವ ಕಾರ್ಯ ಬಿಟ್ಟು ಸಮಾಜಕ್ಕೆ ಒಳ್ಳೆಯದಾಗುವ ಕಾರ್ಯ ಮಾಡಬೇಕು. ಇಲ್ಲದಿದ್ದರೆ ಬಸವ ಭಕ್ತರು ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಬೀದರ್ ಜಿಲ್ಲಾ ಬಸವ ಕೇಂದ್ರ ಎಚ್ಚರಿಕೆ ನೀಡಿದೆ.
ಬಸವಣ್ಣನವರ ತತ್ವಗಳನ್ನು ಗಾಳಿಗೆ ತೂರಿ ಬಸವಯಾತ್ರೆ ನಡೆಸುತ್ತಿರುವ ಹವಾ ಮಲ್ಲಿನಾಥ ಸ್ವಾಮಿ ಕಾರ್ಯವನ್ನು ಬೀದರ್ ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷ ಶರಣಪ್ಪ ಮಿಠಾರೆ, ಬಸವ ಕೇಂದ್ರ ಟ್ರಸ್ಟ್ ಅಧ್ಯಕ್ಷ ಪ್ರಭುರಾವ್ ವಸಮತೆ ಹಾಗೂ ಮಹಿಳಾ ಬಸವ ಕೇಂದ್ರದ ಅಧ್ಯಕ್ಷೆ ವಿದ್ಯಾವತಿ ಬಲ್ಲೂರ್ ಖಂಡಿಸಿದ್ದಾರೆ.
ಈ ಕುರಿತು ಜಂಟಿ ಪತ್ರಿಕಾ ಪ್ರಕಟಣೆ ನೀಡಿರುವ ಇವರು, ‘ಬಸವಣ್ಣನವರು ಹೇಳಿದ್ದೆನು. ನಾವು ಇಲ್ಲಿ ನಡೆಸುತ್ತಿರುವುದೇನು. ಅಜ್ಞಾನ ಮೂಢನಂಬಿಕೆಗಳಿಂದ ನಮ್ಮ ದೇಶ ನಲುಗಿ ಹೋಗಿದೆ. ನಮ್ಮ ದೇಶಕ್ಕೆ ಬಡತನ ದೊಡ್ಡ ಸಮಸ್ಯೆಯಲ್ಲ. ಅಜ್ಞಾನ ಮತ್ತು ಮೂಢನಂಬಿಕೆಗಳು ದೊಡ್ಡ ಸಮಸ್ಯೆಗಳಾಗಿವೆ. ಎಷ್ಟು ದಿನ ನಮ್ಮ ಜನ ಮೂಢನಂಬಿಕೆಯಲ್ಲಿ ಕೊಳೆಯಬೇಕು’ ಎಂದು ಪ್ರಶ್ನಿಸಿದ್ದಾರೆ.
ಮೂಢನಂಬಿಕೆಯಿಂದ ಜನರು ಹೊರ ಬರಲಾಗದಿದ್ದರೆ ಯಾವುದೇ ಬದಲಾವಣೆ ಸಾಧ್ಯವಿಲ್ಲ. ಜನರನ್ನು ಜಾಗೃತರನ್ನಾಗಿ ಮಾಡಿದರೆ ನಮ್ಮ ಬೇಳೆ ಬೇಯುವುದಿಲ್ಲ ಎಂದು ಗೊತ್ತಿದ್ದೇ ಕೆಲವು ಸ್ವಾಮಿಗಳು ಉದ್ದೇಶ ಪೂರ್ವಕವಾಗಿ ಹೂಯಿಲೆಬ್ಬಿಸಿ ಜನರನ್ನು ಮೌಢ್ಯತೆಗೆ ನೂಕುತ್ತಾರೆ. ಇದಕ್ಕೆ ಹವಾ ಮಲ್ಲಿನಾಥ ಸ್ವಾಮಿ ಪ್ರಾರಂಭಿಸಿದ ಬಸವನ ಬಾಗೇವಾಡಿ ಬಸವಯಾತ್ರೆಯೇ ಸಾಕ್ಷಿ ಎಂದು ಟೀಕಿಸಿದ್ದಾರೆ.
ಹವಾ ಮಲ್ಲಿನಾಥ ಸ್ವಾಮಿ ಬಸವಣ್ಣನವರ ಬಗ್ಗೆ ಅಭಿಮಾನ ಇಟ್ಟುಕೊಂಡಿದ್ದಾರೆಂದು ನಮಗೆಲ್ಲ ಖುಷಿಯಾಗಿತ್ತು. ಆದರೆ, ಅದು ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತ ಎಂದು ತಿಳಿದು ಬೇಸರವಾಗಿದೆ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.