ಬೀದರ್: ಶಾಹೀನ್ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ವಿವಾದಾತ್ಮಕ ನಾಟಕ ಮಾಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಹೀನ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಪದಾಧಿಕಾರಿಗಳು ಮಧ್ಯಂತರ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಲಯ ಫೆಬ್ರುವರಿ 25ಕ್ಕೆ ಮುಂದೂಡಿದೆ.
ಶಾಹೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಪ್ರಭಾವಿ ವ್ಯಕ್ತಿಯಾಗಿದ್ದಾರೆ. ನಿರೀಕ್ಷಣಾ ಜಾಮೀನು ಮಂಜೂರು ಮಾಡಿದರೆ ಪ್ರಕರಣದ ತನಿಖೆಯ ಮೇಲೆ ಪರಿಣಾಮ ಬೀರಲಿದೆ ಎಂದು ಸರ್ಕಾರಿ ಅಭಿಯೋಜಕರು ಆಕ್ಷೇಪ ವ್ಯಕ್ತಪಡಿಸಿದರು.
ಶಾಹೀನ್ ಶಿಕ್ಷಣ ಸಂಸ್ಥೆ ಒಂದು ಪ್ರತಿಷ್ಠಿತ ಸಂಸ್ಥೆಯಾಗಿದೆ. ಸಂಸ್ಥೆಯವರು ಜವಾಬ್ದಾರಿ ಸ್ಥಾನದಲ್ಲಿ ಇರುವುದರಿಂದ ತನಿಖೆಗೆ ಸಹಕರಿಸಲಿದ್ದಾರೆ. ಆದ್ದರಿಂದ ಜಾಮೀನು ಮಂಜೂರು ಮಾಡಬೇಕು ಎಂದು ಶಾಹೀನ್ ಸಂಸ್ಥೆ ಪರ ವಕೀಲರು ವಾದ ಮಂಡಿಸಿದರು.
ಅಭಿಯೋಜಕರ ವಾದ ಹಾಗೂ ಶಾಹೀನ್ ಪರ ವಕೀಲರ ಪ್ರತಿವಾದ ಆಲಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಫೆಬ್ರುವರಿ 25ಕ್ಕೆ ಮುಂದೂಡಿದರು.
ಶಾಹೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಖದೀರ್, ಪ್ರಮುಖರಾದ ಹಕ್ ಕಾಲೊನಿಯ ಅಲ್ಲಾವುದ್ದಿನ್ ಸಯ್ಯದ್ ಪಾಶಾ ಹುಸೇನಿ, ಅಬ್ದುಲ್ ಖಾಲಿಕ್ ಅಬ್ದುಲ್ ರಜಾಕ್, ಸಿದ್ಧಿ ತಾಲೀಂನ ಮಹಮ್ಮದ್ಬಿಲ್ಲಾ ಇನಾಮದಾರ್ ಗುಲಾಂನಬಿ ಇನಾಮದಾರ್, ಗೋಲೆಖಾನಾದ ಮಹಮ್ಮದ್ ಮೆಹತಾಬ್ ಮಹಮ್ಮದ್ ಅಬ್ದುಲ್ ಕರೀಂ ಪರವಾಗಿ ಸಲ್ಲಿಸಿರುವ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿ ಫೆಬ್ರುವರಿ 25ಕ್ಕೆ ವಿಚಾರಣೆಗೆ ಬರಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.