ADVERTISEMENT

ಅಹಿತಕರ ಘಟನೆ ನಡೆದರೆ ನಾನು ಹೊಣೆಯಲ್ಲ: ಎಸ್ಪಿಗೆ ಪತ್ರ ಬರೆದ ಕೇಂದ್ರ ಸಚಿವ ಖೂಬಾ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2023, 14:02 IST
Last Updated 16 ಆಗಸ್ಟ್ 2023, 14:02 IST
ಶಾಸಕ ಪ್ರಭು ಚವಾಣ್‌, ಭಗವಂತ ಖೂಬಾ
ಶಾಸಕ ಪ್ರಭು ಚವಾಣ್‌, ಭಗವಂತ ಖೂಬಾ   

ಬೀದರ್‌: ‘ಔರಾದ್‌ ಬಿಜೆಪಿ ಶಾಸಕ ಪ್ರಭು ಚವಾಣ್‌ ಅವರು ನನ್ನ ವಿರುದ್ಧ ಮಾಡಿರುವ ಗಂಭೀರ ಸ್ವರೂಪದ ಆರೋಪಗಳೆಲ್ಲ ಸುಳ್ಳು. ನನಗೆ ಅವರ ಮೇಲೆ ಯಾವುದೇ ದ್ವೇಷ, ಅಸೂಯೆ ಇಲ್ಲ. ಈ ಸುಳ್ಳು ಆರೋಪಗಳ ಕುರಿತು ತನಿಖೆ ನಡೆಸಬೇಕು. ಭವಿಷ್ಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದರೆ ಅದಕ್ಕೂ ನನಗೂ ಯಾವುದೇ ಸಂಬಂಧ ಇರುವುದಿಲ್ಲ. ಅದಕ್ಕೆ ನಾನು ಹೊಣೆಗಾರನಲ್ಲ’ ಎಂದು ಕೇಂದ್ರ ರಾಸಾಯನಿಕ, ರಸಗೊಬ್ಬರ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ.

ಆ.15ರಂದೇ ಪತ್ರ ಬರೆದಿದ್ದಾರೆ. ಕೇಂದ್ರ ಸಚಿವರು ಪತ್ರ ಬರೆದಿರುವುದನ್ನು ಎಸ್ಪಿ ಚನ್ನಬಸವಣ್ಣ ‘ಪ್ರಜಾವಾಣಿ’ಗೆ ಖಚಿತಪಡಿಸಿದ್ದಾರೆ.

ಚವಾಣ್‌ ಅವರು ನನ್ನ ವಿರುದ್ಧ ಸುಳ್ಳು ಆರೋಪ ಮಾಡಿರುವುದು ಅಕ್ಷಮ್ಯ ಅಪರಾಧ. ನನ್ನ ಚಾರಿತ್ರ್ಯ ತೇಜೋವಧೆ ಯಾವುದೇ ಕಾರಣಕ್ಕೂ ಸಲ್ಲದು. ಈ ರೀತಿ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ತಾವು ಕೂಡ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಜರುಗಿಸಬೇಕೆಂದು ಎಸ್ಪಿಯವರಿಗೆ ಬರೆದಿರುವ ಪತ್ರದಲ್ಲಿ ಖೂಬಾ ತಿಳಿಸಿದ್ದಾರೆ.

ADVERTISEMENT

ನನ್ನ 55 ವರ್ಷಗಳ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಬರದ ಹಾಗೆ ಬದುಕಿದ್ದೇನೆ. ಚವಾಣ್‌ ಮಾಡಿರುವ ಗಂಭೀರ ಆರೋಪಗಳಿಂದ ನನಗೆ ದಿಗ್ಭ್ರಮೆ ಆಗಿದೆ. ನಾನು ಒಂದು ವಾರದಿಂದ ಅಘಾತದಲ್ಲಿದ್ದೇನೆ. ನನ್ನ ಪರಿವಾರದವರು, ಕಾರ್ಯಕರ್ತರ ಮನಸ್ಸಿಗೆ ಬಹಳ ನೋವು ಆಗಿದೆ. ಚವಾಣ್‌ ನನ್ನ ವಿರುದ್ಧ ಮಾಡಿರುವ ಆರೋಪಗಳ ಕುರಿತು ಪಕ್ಷದ ರಾಷ್ಟ್ರೀಯ, ರಾಜ್ಯ ಅಧ್ಯಕ್ಷರು, ಇತರೆ ನಾಯಕರ ಗಮನಕ್ಕೆ ತಂದಿದ್ದೇನೆ. ಇಂತಹ ಆರೋಪಗಳಿಂದ ಧೃತಿಗೆಡದೆ ಇರಬೇಕೆಂದು ಅವರು ನನಗೆ ತಿಳಿಸಿದ್ದಾರೆ ಎಂದು ಬುಧವಾರ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.