ADVERTISEMENT

ಮಾವಿನ ಗಿಡಗಳಿಗೆ ಕೀಟ, ರೋಗದ ಬಾಧೆ

ಮರಗಳಿಗೆ ಔಷಧೋಪಚಾರ ಮಾಡಲು ಸಲಹೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2019, 14:05 IST
Last Updated 2 ಮಾರ್ಚ್ 2019, 14:05 IST
ಬೀದರ್‌ ತಾಲ್ಲೂಕಿನ ಗ್ರಾಮವೊಂದರ ಹೊರ ವಲಯದಲ್ಲಿರುವ ಮಾವಿನ ಮರಗಳ ಹೂಗೊಂಚಲುಗಳಲ್ಲಿ ಬೂದಿ ರೋಗ ಕಂಡು ಬಂದಿರುವುದನ್ನು ಪರಿಶೀಲಿಸುತ್ತಿರುವ ತೋಟಗಾರಿಕೆ ತಜ್ಞರು
ಬೀದರ್‌ ತಾಲ್ಲೂಕಿನ ಗ್ರಾಮವೊಂದರ ಹೊರ ವಲಯದಲ್ಲಿರುವ ಮಾವಿನ ಮರಗಳ ಹೂಗೊಂಚಲುಗಳಲ್ಲಿ ಬೂದಿ ರೋಗ ಕಂಡು ಬಂದಿರುವುದನ್ನು ಪರಿಶೀಲಿಸುತ್ತಿರುವ ತೋಟಗಾರಿಕೆ ತಜ್ಞರು   

ಬೀದರ್‌: ಜಿಲ್ಲೆಯ ಎರಡು ತಾಲ್ಲೂಕುಗಳ ಕೆಲ ಗ್ರಾಮಗಳಲ್ಲಿ ಹವಾಮಾನ ವೈಪರಿತ್ಯದಿಂದ ಮಾವಿನ ಗಿಡಗಳ ಎಲೆಗಳ ಮೇಲೆ ಜಿಗಿ ಮತ್ತು ಹೂಗೊಂಚಲುಗಳಲ್ಲಿ ಬೂದಿ ರೋಗ ಕಂಡು ಬಂದಿವೆ.

ಬೀದರ್ ತಾಲ್ಲೂಕಿನ ಚಿದ್ರಿ, ಮನ್ನಳ್ಳಿ, ಬರೂರ್, ಹುಮನಾಬಾದ್ ತಾಲ್ಲೂಕಿನ ಹುಣಚಗೇರಾ, ತಾಳಮಡಗಿ ಗ್ರಾಮಗಳ ಪರಿಸರದಲ್ಲಿರುವ ಮಾವಿನ ಮರಗಳಿಗೆ ರೋಗ ಕಾಣಿಸಿಕೊಂಡಿದೆ. ಮಾವು ಬೆಳೆಗಾರರು ಔಷಧೋಪಚಾರ ಮಾಡಿ
ಕೀಟ, ರೋಗಗಳನ್ನು ನಿಯಂತ್ರಿಸಬೇಕು ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಕೀಟ ರೋಗ ನಿಯಂತ್ರಿಸದಿದ್ದರೆ ಹೂ ಮತ್ತು ಸಣ್ಣ ಸಣ್ಣ ಮಿಡಿಗಳು ಉದುರಿ ಶೇ. 20-25 ರಷ್ಟು ಇಳುವರಿಯಲ್ಲಿ ಕಡಿಮೆಯಾಗುವ
ಸಾಧ್ಯತೆ ಇದೆ. ಆದ್ದರಿಂದ, ಲ್ಯಾಮಡಾ ಸೆಹೆಲೊತ್ರಿನ್ 5 ಇಸಿ (ಕರಾಟೆ) 0.5 ಮಿ.ಲೀ. ದೊಂದಿಗೆ 1 ಮಿ.ಲೀ. ಡೈನೊಕಾಫ್ (ಕರಾಥೆನ್) ಅಥವಾ 1 ಮಿ.ಲೀ. ಟ್ರೈಡೆಮಾರ್ಘ -50 (ಕೆಲಿಕ್ಸಿನ್) ಅಥವಾ 1 ಗ್ರಾಂ ಟ್ರೈಡೆಮೆಫಾನ್-50 ಅಥವಾ 1 ಗ್ರಾಂ ಕಾರ್ಬನ್‌ಡೈಜಿಮ್ ಅಥವಾ 0.5 ಮಿ.ಲೀ. ಸೈಫರ್‌ ಕೊನಾಜೋಲನ್ನು ಅಥವಾ ಮ್ಯಾಂಕೋಜೆಬ್ 2 ಗ್ರಾಂ+ಕರಾಥೆನ್ 1 ಮಿ.ಲೀ. ಔಷಧಿಯನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು.

ADVERTISEMENT

ಕಾಯಿಗಳು ಬಟಾಣಿ ಮತ್ತು ನಿಂಬೆ ಹಣ್ಣಿನ ಗಾತ್ರ ಪಡೆದಾಗ ಮಾವಿನ ಮರಗಳಿಗೆ ಬುಡದಿಂದ 3-4 ಅಡಿ ದೂರದಲ್ಲಿ ಬದು ಮಾಡಿ ಮಾಡಿ ನೀರು ಕೊಡಬೇಕು. ಕೆವಲ ಹೂ ಮಾತ್ರ ಇದ್ದ ಗಿಡಗಳಿಗೆ ನೀರನ್ನು ಕೊಡಬಾರದು ಎಂದು ಹೇಳಿದ್ದಾರೆ.

ವಿವರಗಳಿಗೆ ತೋಟಗಾರಿಕೆ ಅಧಿಕಾರಿಗಳ್ನು ಅಥವಾ ಹಾರ್ಟಿಕ್ಲಿನಿಕ್ ವಿಷಯ ತಜ್ಞರನ್ನು (9482053985) ಸಂಪರ್ಕಿಸಬಹುದಾಗಿದೆ ಎಂದು ಬೀದರ ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕ ಮಲ್ಲಿಕಾರ್ಜುನ ಬಾವುಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.