ADVERTISEMENT

ಈದ್‌ ಮಿಲಾದ್: ಸರಳ ಆಚರಣೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2022, 15:31 IST
Last Updated 9 ಅಕ್ಟೋಬರ್ 2022, 15:31 IST
ಬೀದರ್‌ನ ಓಲ್ಡ್‌ಸಿಟಿಯಲ್ಲಿ ಯುವಕರು ಧಾರ್ಮಿಕ ಧ್ವಜ ಹಿಡಿದು ಬೈಕ್‌ ರ್‍ಯಾಲಿ ನಡೆಸಿದರು
ಬೀದರ್‌ನ ಓಲ್ಡ್‌ಸಿಟಿಯಲ್ಲಿ ಯುವಕರು ಧಾರ್ಮಿಕ ಧ್ವಜ ಹಿಡಿದು ಬೈಕ್‌ ರ್‍ಯಾಲಿ ನಡೆಸಿದರು   

ಬೀದರ್: ಜಿಲ್ಲೆಯಲ್ಲಿ ಮುಸ್ಲಿಮರು ಈದ್‌ ಮಿಲಾದ್ ಹಬ್ಬವನ್ನು ಈ ವರ್ಷವೂ ಸರಳವಾಗಿ ಆಚರಿಸಿದರು. ಮಸೀದಿಗಳಲ್ಲಿ ಯಾವುದೇ ವಿಶೇಷ ಪ್ರಾರ್ಥನೆ ಇರಲಿಲ್ಲ. ಆದರೆ, ಮದರಸಾಗಳಲ್ಲಿ ಕುರ್‌ಆನ್‌ ಪಠಣ ಹಾಗೂ ಪ್ರವಚನ ಕಾರ್ಯಕ್ರಮಗಳು ನಡೆದವು.

ಕೆಲ ಯುವಕರು ಧಾರ್ಮಿಕ ಧ್ವಜ ಹಿಡಿದು ಓಲ್ಡ್‌ಸಿಟಿಯಲ್ಲಿ ಬೈಕ್‌ ರ್‍ಯಾಲಿ ನಡೆಸಿದರು. ಘೋಷಣೆಗಳನ್ನೂ ಕೂಗಿದರು. ಮಸೀದಿಗಳಲ್ಲೇ ಇರುವ ಮದರಸಾಗಳಲ್ಲಿ ಒಂದು ತಿಂಗಳವರೆಗೆ ಪ್ರವಾದಿ ಮಹಮ್ಮದ್ ಅವರ ಸಂದೇಶ ವಾಚನ ಹಾಗೂ ತತ್ವ ಬೋಧನೆ ನಡೆಯಲಿದೆ.

ಮುಸ್ಲಿಂ ಸಮುದಾಯದ ಮುಖಂಡರು ನಗರದ ಜಾಮಿಯಾ ಮಸೀದಿಯಲ್ಲಿ ಸಭೆ ಸೇರಿ ಸುಧೀರ್ಘ ಸಮಾಲೋಚನೆ ನಡೆಸಿದರು.

ADVERTISEMENT

ಮಹಮೂದ್‌ ಗವಾನ್‌ ಮದರಸಾದಲ್ಲಿ ಅಹಿತಕರ ಘಟನೆ ನಡೆದು ಈಗಷ್ಟೇ ವಾತಾವರಣ ತಿಳಿಗೊಂಡಿದೆ. ದೊಡ್ಡ ಮೆರವಣಿಗೆ ಮಾಡಿದರೆ ಮೆರವಣಿಗೆಯಲ್ಲಿ ಇದ್ದವರನ್ನು ನಿಯಂತ್ರಿಸುವುದು ಕಷ್ಟವಾಗಲಿದೆ. ಕೋವಿಡ್‌ ಅವಧಿಯಲ್ಲಿ ಎರಡು ವರ್ಷ ಮೆರವಣಿಗೆ ನಡೆಸಿಲ್ಲ. ಪರಿಸ್ಥಿತಿ ಸೂಕ್ಷ್ಮತೆ ಅರಿತು ಮೆರವಣಿಗೆ ನಡೆಸದಿರುವುದು ಸೂಕ್ತ ಎಂದು ಕೆಲ ಮುಖಂಡರು ಸಲಹೆ ನೀಡಿದರು. ಹೀಗಾಗಿ ನಗರದಲ್ಲಿ ಭಾನುವಾರ ದೊಡ್ಡ ಮೆರವಣಿಗೆ ನಡೆಯಲಿಲ್ಲ.

ನಗರದ ಗವಾನ್‌ ಚೌಕ್‌, ಚೌಬಾರಾ ಹಾಗೂ ಕೆಲ ಮಸೀದಿಗಳಿಗೆ ವಿದ್ಯುತ್‌ ದೀಪಗಳ ಅಲಂಕಾರ ಮಾಡಲಾಗಿದೆ. ಮುಸ್ಲಿಮರು ಎಂದಿನಂತೆ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.