ಬೀದರ್: ‘ಯುವಕರು ಸದೃಢವಾಗಿದ್ದರೆ ದೇಶವೂ ಸದೃಢವಾಗಿರಲು ಸಾಧ್ಯ. ಹೀಗಾಗಿ ದೈಹಿಕ ಸದೃಢತೆಗಾಗಿ ವಿದ್ಯಾರ್ಥಿಗಳು ನಿತ್ಯ ಒಂದು ಗಂಟೆ ವ್ಯಾಯಾಮ ಮಾಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್ ಹೇಳಿದರು.
ಇಲ್ಲಿಯ ಬಿ.ವಿ.ಭೂಮರಡ್ಡಿ ಕಾಲೇಜಿನ ಆವರಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬಿ.ವಿ.ಬಿ ಕಾಲೇಜಿನ ಎನ್ಸಿಸಿ ಹಾಗೂ ಎನ್ಎಸ್ಎಸ್ ಘಟಕಗಳ ಆಶ್ರಯದಲ್ಲಿ ಏರ್ಪಡಿಸಿದ್ದ ‘ಫಿಟ್ ಇಂಡಿಯಾ ಫ್ರೀಡಂ ರನ್’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮಾನಸಿಕ ಒತ್ತಡದಿಂದ ಹೊರ ಬರಲು ಪ್ರಸ್ತುತ ಶೇಕಡ 65 ರಷ್ಟು ಜನರಿಗೆ ಯೋಗ ಹಾಗೂ ದೈಹಿಕ ವ್ಯಾಯಾಮದ ಅಗತ್ಯವಿದೆ’ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್. ಮಾತನಾಡಿ, ‘ಮೊಬೈಲ್ ಗೀಳು ಆರೋಗ್ಯಕರ ಜೀವನಶೈಲಿಗೆ ಅಪಾಯಕಾರಿವಾಗಿ ಪರಿಣಮಿಸಿದೆ. ದೇಹ ಹಾಗೂ ದೇಶದ ಭವಿಷ್ಯಕ್ಕೂ ಗಂಡಾಂತರ ತಂದೊಡ್ಡಿದೆ. ಹೀಗಾಗಿ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯಕ್ಕೆ ವ್ಯಾಯಾಮ ಹಾಗೂ ಯೋಗ ಮಾಡಲು ಯುವಕರು ಸಂಕಲ್ಪ ಮಾಡಬೇಕು’ ಎಂದು ಹೇಳಿದರು;
ಕರ್ನಲ್ ಸುಶೀಲಕುಮಾರ ತಿವಾರಿ, ಕರ್ನಲ್ ಸಂದೀಪ ಜನಪಾತ್, ತಹಶೀಲ್ದಾರ್ ಗಂಗಾದೇವಿ, ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ದೀಪಕ, ಪ್ರಭುಲಿಂಗ ಬಿರಾದಾರ, ಮೇಜರ್ ಪಿ. ವಿಠಲ ರೆಡ್ಡಿ, ಬಾಬು ವಾಲಿ ಹಾಗೂ ಡಾ.ಗೌತಮ ಅರಳಿ ಇದ್ದರು.
ಯೋಗಪಟು ಧೋಂಡಿರಾಮ ಅವರು ವಿದ್ಯಾರ್ಥಿಗಳಿಗೆ ಯೋಗಭ್ಯಾಸ ಮಾಡಿಸಿದರು. ಪ್ರಾಚಾರ್ಯ ಎಸ್.ಕೆ. ಸಾತನೂರ ಸ್ವಾಗತಿಸಿದರು, ಬಸವರಾಜ ಹೇಡೆ ನಿರೂಪಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಜಿ.ನಾಡಗೇರ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.