ಕಮಲನಗರ: ‘ಸ್ವಾರ್ಥ, ಅಹಂಕಾರ ದೂರವಿಟ್ಟು ಕರ್ತವ್ಯ ನಿಷ್ಠೆ, ಮಾನವೀಯತೆ ರೂಢಿಸಿಕೊಂಡಾಗ ಮಾತ್ರ ಸರ್ಕಾರಿ ಸೇವೆ ಸಾರ್ಥಕವಾಗುತ್ತದೆ’ ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ್ ಹೇಳಿದರು.
ಪಟ್ಟಣದ ತಾ.ಪಂ. ಕಚೇರಿಯ ಆವರಣದಲ್ಲಿ ಶನಿವಾರ ಹಮ್ಮಿಕೊಂಡ ನಿವೃತ್ತ ಪಿಡಿಒಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಪ್ರತಿ ಸರ್ಕಾರಿ ನೌಕರರಿಗೆ ನಿವೃತ್ತಿ ಅನಿವಾರ್ಯ. ಯಾವುದೇ ಇಲಾಖೆಯಲ್ಲಿ ತಮ್ಮ ಕೆಲಸವನ್ನು ಯಶಸ್ವಿಯಾಗಬೇಕಾದರೆ ಮಾನವೀಯತೆ ಮತ್ತು ಸರಳತೆ ಇರಬೇಕು. ಸರಳ ಸಜ್ಜನ ವ್ಯಕ್ತಿತ್ವ ಹೊಂದಿದ್ದ ಬಾಬುರಾವ ಸಂಗಮಕರ ಹಾಗೂ ವಿಜಯಕುಮಾರ ಪಾಟೀಲ ಅವರು ಶಿಸ್ತು ಮತ್ತು ಸಮಯ ನಿರ್ವಹಣೆ ಇತರರಿಗೆ ಮಾದರಿಯಾಗಿದೆ. ಇವರು ಉತ್ತಮ ಅಧಿಕಾರಿಯಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿ ನಿವೃತ್ತಿಯಾಗುತ್ತಿದ್ದಾರೆ’ ಎಂದರು.
ತಾ.ಪಂ. ಸಹಾಯಕ ನಿರ್ದೇಶಕ ಹಣಮಂತರಾಯ ಕೌಟಗೆ ಮಾತನಾಡಿ, ‘ಎಲ್ಲಾ ಸರ್ಕಾರಿ ನೌಕರರಲ್ಲಿ ಪ್ರಾಮಾಣಿಕತೆ ಕೆಲಸದಲ್ಲಿ ಪಾರದರ್ಶಕತೆ ಇದ್ದರೆ ಯಾವುದೇ ಅನುಮಾನಗಳಿಗೆ ಆಸ್ಪದವಿರುವುದಿಲ್ಲ. ಉತ್ತಮ ಸೇವೆ ಸಲ್ಲಿಸಿದರೆ ಮಾತ್ರ ನಿವೃತ್ತಿಯ ನಂತರ ದಿನಗಳಲ್ಲಿ ಮಾನಸಿಕ ನೆಮ್ಮದಿಯಿಂದ ಬದುಕು ಸಾಗಿಸಲು ಸಾಧ್ಯವಾಗುತ್ತದೆ ಎಂದು ನುಡಿದರು.
ನಿವೃತ್ತ ಪಿಡಿಒಗಳಾದ ಬಾಬುರಾವ ಸಂಗಮಕರ, ವಿಜಯಕುಮಾರ ಪಾಟೀಲ್ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಪಿಡಿಒಗಳಾದ ದತ್ತಾತ್ರಿ ಪೂಜಾರಿ, ಪ್ರಭುದಾಸ ಜಾಧವ, ಮಲ್ಲೇಶ, ಪ್ರಶಾಂತ, ಮನೋಹರ, ಬಾಷಾಸಾಬ ಮುಲ್ಲಾ, ವೆಂಕಟೇಶ ದೇಶಪಾಂಡೆ, ವಿವಿಧ ಗ್ರಾಮ ಪಂಚಾಯಿತಿ ಪಿಡಿಒ, ಸಿಬ್ಬಂದಿ ಹಾಗೂ ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ಮುಖಂಡರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.