ADVERTISEMENT

ಅಮರೇಶ್ವರ ಜಾತ್ರೆಗೆ ದೂಳಿನ ಸ್ವಾಗತ

ಸಚಿವ ಚವಾಣ್ ತವರಲ್ಲಿ ಜನರ ಆಕ್ರೋಶ

ಮನ್ನಥಪ್ಪ ಸ್ವಾಮಿ
Published 17 ಫೆಬ್ರುವರಿ 2020, 5:58 IST
Last Updated 17 ಫೆಬ್ರುವರಿ 2020, 5:58 IST
ಔರಾದ್ ಪಟ್ಟಣದಲ್ಲಿ ರಸ್ತೆ ಹದಗೆಟ್ಟು ದೂಳಿನಲ್ಲಿ ಸಂಚರಿಸುತ್ತಿರುವುದು
ಔರಾದ್ ಪಟ್ಟಣದಲ್ಲಿ ರಸ್ತೆ ಹದಗೆಟ್ಟು ದೂಳಿನಲ್ಲಿ ಸಂಚರಿಸುತ್ತಿರುವುದು   

ಔರಾದ್: ಪಟ್ಟಣದಲ್ಲಿ ಫೆಬ್ರುವರಿ 18ರಿಂದ ಒಂದು ವಾರ ಅಮರೇಶ್ವರ ಜಾತ್ರೆ ನಡೆಯಲಿದೆ. ದೇವಸ್ಥಾನಕ್ಕೆ ಹೋಗುವ ಏಕೈಕ ಮುಖ್ಯ ರಸ್ತೆ ಎರಡು ವರ್ಷಗಳಿಂದ ಹಾಳಾಗಿದೆ. ಜಾತ್ರೆಗೆ ಬರುವ ಭಕ್ತರು ದೂಳಿನ ಮಜ್ಜನ ಅನುಭವಿಸಬೇಕಾದ ಸ್ಥಿತಿ ಎದುರಾಗಿದೆ.

ಹಾಗೆಯೇ, ಪಟ್ಟಣದಲ್ಲಿ ಬೀದಿ ದೀಪಗಳು ಹಾಳಾಗಿವೆ. ಅವುಗಳನ್ನು ಸರಿಪಡಿಸಲು ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

‘ಅಮರೇಶ್ವರ ದೇವಸ್ಥಾನವು ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಬರುತ್ತಿದೆ. ಜಾತ್ರೆ ವ್ಯವಸ್ಥೆಯನ್ನು ಸರ್ಕಾರ ನೋಡಿಕೊಳ್ಳಬೇಕು. ಆದರೆ ಅಧಿಕಾರಿಗಳು ಮುತುವರ್ಜಿ ವಹಿಸಿ ಜಾತ್ರೆಗೆ ಸಿದ್ಧತೆ ಮಾಡುತ್ತಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ಅನೀಲ ಜಿರೋಬೆ ದೂರಿದ್ದಾರೆ.

ADVERTISEMENT

‘ಜಾತ್ರೆ ಸಮೀಪಿಸುತ್ತಿದ್ದರೂ ದೇವಸ್ಥಾನಕ್ಕೆ ಸುಣ್ಣ ಬಣ್ಣ ಮಾಡಿಲ್ಲ, ಗರ್ಭಗುಡಿಯ ಪಕ್ಕದಲ್ಲಿನ ಕಲ್ಯಾಣ ಮಂಟಪವನ್ನು ಸ್ವಚ್ಛ ಮಾಡಿಲ್ಲ. ಜಾತ್ರೆಗೆ ಬರುವ ಭಕ್ತರಿಗೆ ಸೂಕ್ತ ವ್ಯಸವ್ಥೆ ಕಲ್ಪಿಸಲು ಮುಂದಾಗುತ್ತಿಲ್ಲ’ ಎಂದು ಅವರು ಆರೋಪಿಸಿದ್ದಾರೆ.

‘ಮಹಾದ್ವಾರ ನಿರ್ಮಾಣ, ಸಿಸಿ ಕ್ಯಾಮೆರಾ ಅಳವಡಿಕೆ ಸೇರಿದಂತೆ ದೇವಸ್ಥಾನದ ಅಭಿವೃದ್ಧಿ ಮಾಡುವಂತೆ ಭಕ್ತರು ಮಾಡಿಕೊಂಡ ಮನವಿಗೆ ಸ್ಪಂದನೆ ಸಿಕ್ಕಿಲ್ಲ’ ಎಂದು ಪಟ್ಟಣದ ನಾಗರಿಕರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಪ್ರತಿನಿಧಿಸುವ ಔರಾದ್ ತಾಲ್ಲೂಕು ಕೇಂದ್ರದಲ್ಲಿ ಇಂತಹ ಸ್ಥಿತಿ ಇದೆ. ಈ ರಸ್ತೆ ದುರಸ್ತಿ ಮಾಡಿ ಜನರಿಗೆ ಅನುಕೂಲ ಮಾಡುವಂತೆ ಹಲವು ಬಾರಿ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಸಚಿವರ ವಿರುದ್ಧವೂಜನರು ಅಸಮಾಧಾನ ಹೊರ ಹಾಕುತ್ತಿದ್ದಾರೆ.

‘ಪಟ್ಟಣದ ಪ್ರಮುಖ ರಸ್ತೆ ಅಭಿವೃದ್ಧಿಪಡಿಸುವ ಸಂಬಂಧ ಸಚಿವ ಚವಾಣ್ ಜತೆ ಚರ್ಚಿಸಲಾಗಿದೆ. ಅದಕ್ಕಾಗಿ ಅನುದಾನ ಇಟ್ಟಿದ್ದಾರೆ. ಆದಷ್ಟು ಬೇಗ ಕಾಮಗಾರಿ ಆರಂಭವಾಗಲಿದೆ’ ಎನ್ನುತ್ತಾರೆಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಚಾಂದಪಟೇಲ್.

ಜಾತ್ರೆ ಅಂಗವಾಗಿ ಸಾಕಷ್ಟು ಜನರು ಪಟ್ಟಣಕ್ಕೆ ಆಗಮಿಸುತ್ತಾರೆ. ಈ ನಿಟ್ಟಿನಲ್ಲಿ ರಸ್ತೆಯಲ್ಲಿ ಧೂಳಿನ ಸಮಸ್ಯೆ ನಿವಾರಿಸಲು ಪರ್ಯಾಯ ವ್ಯವಸ್ಥೆ ರಸ್ತೆಗೆ ನೀರು ಸಿಂಪರಿಸುವ ಕೆಲಸಕ್ಕೆ ಮುಂದಾಗಬೇಕು ಎನ್ನುತ್ತಾರೆ ಸಾರ್ವಜನಿಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.