ಔರಾದ್: ‘ಹೇಮರಡ್ಡಿ ಮಲ್ಲಮ್ಮ ಕಷ್ಟ-ಕಾರ್ಪಣ್ಯಗಳ ನಡುವೆಯೂ ಆದರ್ಶ ಬದುಕು ಸಾಗಿಸಿ ಸಮಾಜಕ್ಕೆ ದಾರಿ ದೀಪವಾದವರು’ ಎಂದು ಸಾಹಿತಿ ವಿಜಯಲಕ್ಷ್ಮಿ ಕೌಟಗೆ ಹೇಳಿದರು.
ತಾಲ್ಲೂಕು ಆಡಳಿತ ಮಂಗಳವಾರ ಇಲ್ಲಿ ಆಯೋಜಿಸಿದ್ದ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ‘ಮಲ್ಲಮ್ಮ ಕಷ್ಟಗಳನ್ನು ನುಂಗಿ ಗಂಡನಮನೆ ಬೆಳೆಸಿದರು. ಶ್ರೀಶೈಲ ಚೆನ್ನಮಲ್ಲಿಕಾರ್ಜುನನ್ನು ಅರಾಧಿಸಿ ಅಮರತ್ವ ಸಾಧಿಸಿದವರು. ರಡ್ಡಿ ಸಮುದಾಯದ ಬದುಕು ಸದಾ ಬಂಗಾರವಾಗಲಿ ಎಂದು ಪ್ರಾರ್ಥಿಸಿದ ಆ ಮಹಾ ತಾಯಿ ಸಮಾಜಕ್ಕೆ ಮಾದರಿ’ ಎಂದರು.
ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ ಸ್ವಾಗತಿಸಿ ‘ಹೇಮರೆಡ್ಡಿ ಮಲ್ಲಮ್ಮ ಅವರಂತಹ ತಾಯಿಯ ತ್ಯಾಗ ಬಹಳ ದೊಡ್ಡದು. ಅವರ ವಿಚಾರಗಳು ಎಲ್ಲ ಸಮಾಜಕ್ಕೂ ಆದರ್ಶವಾಗಬೇಕು’ ಎಂದು ಹೇಳಿದರು.
ಗ್ರೇಡ್-2 ತಹಶೀಲ್ದಾರ್ ಮಲಶೆಟ್ಟಿ ಚಿದ್ರೆ, ತಾಲ್ಲೂಕು ಪಂಚಾಯಿತಿ ಇಒ ಬೀರೇಂದ್ರಸಿಂಗ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್. ನಗನೂರ, ರಡ್ಡಿ ಸಮಾಜದ ತಾಲ್ಲೂಕು ಅಧ್ಯಕ್ಷ ಶಂಕರರಡ್ಡಿ, ಗೌರವಾಧ್ಯಕ್ಷ ಅಶೋಕರಡ್ಡಿ, ಮಾರುತಿರಡ್ಡಿ, ಜೈಪಾಲರಡ್ಡಿ, ಘಾಳರಡ್ಡಿ, ನರಸಾರಡ್ಡಿ, ಅಂಜಾರಡ್ಡಿ, ಗೋವಿಂದರಡ್ಡಿ, ಗುರುನಾಥರಡ್ಡಿ, ಸಾಯಿನಾಥರಡ್ಡಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹೇಮರೆಡ್ಡಿ ಮಲ್ಲಮ್ಮ ಭಾವಚಿತ್ರದ ಮೆರವಣಿಗೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.