ಭಾಲ್ಕಿ: ಕಲಬುರಗಿಯ ಸೇಡಂನಲ್ಲಿ ನಡೆಯಲಿರುವ ಕೊತ್ತಲ ಸ್ವರ್ಣ ಜಯಂತಿ, ಭಾರತೀಯ ಸಂಸ್ಕೃತಿ ಉತ್ಸವ-7ರ ಯಶಸ್ಸಿಗೆ ಎಲ್ಲರ ಸಹಕಾರ ಅತ್ಯಗತ್ಯ ಪ್ರಥಮ ದರ್ಜೆ ಗುತ್ತಿಗೆದಾರ ಚನ್ನಬಸವಣ್ಣ ಬಳತೆ ಹೇಳಿದರು.
ಪಟ್ಟಣದ ಸದ್ಗುರು ವಿದ್ಯಾಲಯದಲ್ಲಿ ಶುಕ್ರವಾರ ನಡೆದ ಕೊತ್ತಲ ಸ್ವರ್ಣ ಜಯಂತಿ, ಭಾರತೀಯ ಸಂಸ್ಕೃತಿ ಉತ್ಸವ 7ರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಭಾರತೀಯ ಸಂಸ್ಕೃತಿ ಉತ್ಸವವು ಜಗದ್ವಿಖ್ಯಾತ ಉತ್ಸವ ಆಗಲಿದೆ. ಸುಮಾರು 240 ಎಕರೆ ಪ್ರದೇಶದ ಪ್ರಕೃತಿ ನಗರ, ಬೀರನಹಳ್ಳಿ ಕ್ರಾಸ್ ಸೇಡಂ ರಸ್ತೆಯಲ್ಲಿ ಜನವರಿ 29ರಿಂದ ಫೆಬ್ರುವರಿ 6 ರವರೆಗೆ ವಿವಿಧ ಸಮಾವೇಶಗಳನ್ನು ಹಮ್ಮಿಕೊಳ್ಳುವ ಮೂಲಕ 9 ದಿವಸಗಳ ಕಾಲ ಅತಿ ವಿಜೃಂಭಣೆಯಿಂದ ಉತ್ಸವ ನಡೆಸಲಾಗುತ್ತಿದ್ದು, 9 ದಿವಸಗಳಲ್ಲಿ ಸುಮಾರು 30 ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ. ನಮ್ಮ ತಾಲ್ಲೂಕಿನಿಂದ ಹೆಚ್ಚು ಜನರು ಭಾಗವಹಿಸುವಂತೆ ಪ್ರೋತ್ಸಾಹಿಸುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.
ವಿಕಾಸ ಅಕಾಡೆಮಿಯ ಪ್ರಮುಖ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ಉತ್ಸವದಲ್ಲಿ ಮಾತೃ ಸಮಾವೇಶ, ಶೈಕ್ಷಣಿಕ ಸಮಾವೇಶ, ಯುವ ಸಮಾವೇಶ, ಗ್ರಾಮ ಸಮಾವೇಶ, ಕೃಷಿ ಸಮಾವೇಶ ಸೇರಿ ಹಲವಾರು ಸಮಾವೇಶಗಳು ನಡೆಯುತ್ತಿದ್ದು, ಎಲ್ಲಾ ಸಮಾವೇಶಗಳಲ್ಲಿ ಭಾರತೀಯ ಸಂಸ್ಕೃತಿ ಬಿಂಬಿಸುವ ಹಲವಾರು ಗಣ್ಯರು ಭಾಗವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಶಿವು ಲೋಖಂಡೆ, ಸೋಮನಾಥಪ್ಪ ಅಷ್ಟೂರೆ, ಮಲ್ಲಮ್ಮ ಆರ್.ಪಾಟೀಲ, ಚಂದ್ರಶೇಖರ ಎಮ್ಮೆ, ಕಿಶನರಾವ್ ಪಾಟೀಲ ಇಂಚೂರಕರ್, ಅಕ್ಷಯ ಮುದ್ದಾ, ನಾಗಭೂಷಣ ಮಾಮಡಿ, ಶಿವಾಜಿರಾವ್ ಮಾನೆ, ರೇವಣಸಿದ್ದ ಜಾಡರ್, ಶ್ರುತಿ ಸಂತೋಷ, ಕವಿತಾ ಓಂಕಾರ ಮಜಕೂರೆ, ಮಹಾಲಿಂಗ ಖಂಡ್ರೆ, ಜೈರಾಜ ಕೊಳ್ಳಾ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.