ಬೀದರ್: ಬೆಳಗಾವಿಯ ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆರವುಗೊಳಿಸಿರುವುದನ್ನು ಖಂಡಿಸಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಸಂಘಟನೆಯ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ಬಳಿಕ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅವರಿಗೆ ಸಲ್ಲಿಸಿದರು.
10ನೇ ಪಠ್ಯದಿಂದ ರಾಯಣ್ಣ ಅವರ ಪಾಠ ಕೈಬಿಟ್ಟಿರುವುದು ಹಾಗೂ ಬೆಳಗಾವಿಯ ಪೀರನವಾಡಿಯಲ್ಲಿನ ಪ್ರತಿಮೆ ತೆರವುಗೊಳಿಸಿರುವುದನ್ನು ಗಮನಿಸಿದರೆ ಸರ್ಕಾರ ರಾಯಣ್ಣ ಅವರ ವಿರುದ್ಧವಾಗಿದೆ ಎನ್ನುವ ಅನುಮಾನ ಮೂಡುತ್ತದೆ ಎಂದು ಆರೋಪಿಸಿದರು.
ಬೆಳಗಾವಿಯಲ್ಲಿ ತೆರವುಗೊಳಿಸಿದ ಸ್ಥಳದಲ್ಲೇ ರಾಯಣ್ಣ ಅವರ ಮೂರ್ತಿ ಪ್ರತಿಷ್ಠಾಪನೆಗೆ ಜಿಲ್ಲಾಧಿಕಾರಿಗೆ ಆದೇಶ ನೀಡಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಲೋಕೇಶ ಮರ್ಜಾಪುರ, ಶಿವರಾಜ ಮಲ್ಕಾಪುರ, ವಿಶ್ವನಾಥ ನ್ಯಾಮತಾಬಾದ್, ರಾಜು ಆಣದೂರ, ಕುಮಾರ ನಿಜಾಂಪುರ, ಶಿವು ಚಿಮಕೋಡ, ತುಕಾರಾಮ ಚಿದ್ರಿ, ಯಲ್ಲಾಲಿಂಗ ಕಪಲಾಪುರ, ಲೋಕೇಶ ಹಣಮಂತವಾಡಿ, ಪಂಡಿತ ಕಬೀರಾಬಾದ್ ವಾಡಿ, ಸಂತೋಷ ನಂದಗಾಂವ, ಶಿವಾಜಿ ಖಾನಾಪುರ, ಶಿವು ಸುಲ್ತಾನಪುರ, ಶಿವು ಅಷ್ಟೂರ, ಸದಾನಂದ ಫತೇಪುರ, ಪವನ್ ರಾಠೋಡ್, ಕಿರಣ ಸಕ್ಕರಗಂಜವಾಡಿ ಹಾಗೂ ರಮೇಶ ಮರ್ಜಾಪುರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.