ಬಸವಕಲ್ಯಾಣ: ‘ಗೊಂಡ ಕುರುಬ ಜಾತಿಪ್ರಮಾಣ ಪತ್ರ ದೊರಕಿಸಲು ಪ್ರಯತ್ನಿಸಲಾಗುವುದು. ನಗರದಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತ ನಿರ್ಮಿಸಲಾಗುವುದು’ ಎಂದು ಶಾಸಕ ಶರಣು ಸಲಗರ ಭರವಸೆ ನೀಡಿದರು.
ನಗರದಲ್ಲಿ ಸೋಮವಾರ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿಯಲ್ಲಿ ಅವರು ಮಾತನಾಡಿದರು.
‘ಸಂಗೊಳ್ಳಿ ರಾಯಣ್ಣ ಮತ್ತು ಕಿತ್ತೂರ ರಾಣಿ ಚೆನ್ನಮ್ಮನಂಥವರು ತ್ಯಾಗ, ಬಲಿದಾನಗೈಯದಿದ್ದರೆ ನಾವು ಇಂದು ಸ್ವಾತಂತ್ರ್ಯ ದಿನ ಆಚರಿಸುತ್ತಿರಲಿಲ್ಲ. ಅಪ್ಪಟ ದೇಶಭಕ್ತರಾಗಿದ್ದ ಅವರ ಆದರ್ಶದ ಪಾಲನೆ ಆಗಬೇಕು’ ಎಂದರು.
‘ತಾಲ್ಲೂಕಿನ ಸರ್ವಾಂಗೀಣ ಪ್ರಗತಿಗೆ ಎಲ್ಲರ ಸಹಕಾರ ಅಗತ್ಯ. ಮಳೆ ಹಾನಿ ಅನುಭವಿಸಿದ 600 ರೈತರಿಗೆ ಮನೆ ಬಾಗಿಲಿಗೆ ಪರಿಹಾರಧನ ತಲುಪಿಸಲಾಗಿದೆ. ಮುಂಬರುವ ಸಂಗೊಳ್ಳಿ ರಾಯಣ್ಣ ಜಯಂತಿ ಅದ್ಧೂರಿಯಿಂದ ಆಚರಿಸೋಣ’ ಎಂದರು.
ಮುಖಂಡ ಚಂದ್ರಕಾಂತ ಮೇತ್ರೆ ಮಾತನಾಡಿ,‘ಅಗತ್ಯ ದಾಖಲೆ ಇದ್ದರೂ ಗೊಂಡ ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ. 1990ರಲ್ಲಿ ನಾರಾಯಣಪುರ ತಿರುವಿನಲ್ಲಿ ಸಂಗೊಳ್ಳಿ ರಾಯಣ್ಣ ಭಾವಚಿತ್ರ ಅಳವಡಿಸಿದ್ದರೂ ಮೂರ್ತಿ ಪ್ರತಿಷ್ಠಾಪಿಸಲಾಗಿಲ್ಲ. ಈ ಕಾರ್ಯ ಶಾಸಕರು ನೆರವೇರಿಸಬೇಕು’ ಎಂದರು.
ರವಿ ನಾಗೀನಕೆರೆ ಮಾತನಾಡಿ,‘ಸಮುದಾಯ ಭವನಕ್ಕಾಗಿ ಜಮೀನು ಒದಗಿಸಬೇಕು’ ಎಂದು ಕೇಳಿಕೊಂಡರು. ಮಾರುತಿ ಸೂರ್ಯವಂಶಿ, ರಾಮಲಿಂಗ ಎಳ್ಳೂರೆ ಮಾತನಾಡಿದರು.
ಗೌರ ಬೀರಪ್ಪ ಮುತ್ಯಾ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ನಿರ್ಮಲಾ ವೈಜನಾಥ ಮಾನೆಗೋಪಾಳೆ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ತುಕಾರಾಮ ಮಲ್ಲಪ್ಪ, ಮುಖಂಡರಾದ ಆನಂದ ದೇವಪ್ಪ, ಅರ್ಜುನ ಕನಕ, ಬಂಡೆಪ್ಪ ಮೇತ್ರೆ, ಸುಭಾಷ ರೇಕುಳಗಿ, ಗಣೇಶ ಜಾನಾಪುರ, ನವನಾಥ ಮಂಗಳೂರೆ, ರಾಮ ಕನಕಟ್ಟೆ ಹಾಗೂ ಭೀಮಣ್ಣ ವಾಡೆಕರ್, ಅಂಬಾರಾಯ ಮೇತ್ರೆ, ರಾಜಪ್ಪ ಹಿರಗೆಪ್ಪ, ರಾಮಲಿಂಗ ಇಲ್ಲಾಳ ಹಾಗೂ ಹುಲೆಪ್ಪ ಕಿಟ್ಟಾ ಪಾಲ್ಗೊಂಡಿದ್ದರು.
ಸಂಗೊಳ್ಳಿ ರಾಯಣ್ಣ ಜಯಂತಿ
ಹುಲಸೂರ: ಪಟ್ಟಣದ ಭೂಮಗುಂಡೇಶ್ವರ ವೃತ್ತದಲ್ಲಿ ಸೋಮವಾರ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನವರ ಜಯಂತಿ ಆಚರಿಸಲಾಯಿತು.
ಸಂಗೊಳ್ಳಿ ರಾಯಣ್ಣನವರ ಭಾವಚಿತ್ರಕ್ಕೆ ಶಾಸಕ ಶರಣು ಸಲಗರ ಪೂಜೆ ಸಲ್ಲಿಸಿದರು.
ತಹಶೀಲ್ದಾರ್ ಶಿವಾನಂದ ಮೇತ್ರೆ, ತಾ.ಪಂ. ಇಒ ಮಹಾದೇವ ಎಸ್ ಬಾಬಳಗಿ, ಪೊಲೀಸ್ ಉಪ-ನಿರೀಕ್ಷಕ ನಿಂಗಪ್ಪ ಮಣ್ಣುರು, ಜಿ.ಪಂ ಮಾಜಿ ಅಧ್ಯಕ್ಷ ಅನೀಲ ಪಿ ಭೂಸಾರೆ, ಜಿ.ಪಂ ಮಾಜಿ ಸದಸ್ಯ ಸುಧೀರ್ ಕಾಡಾದಿ, ಗ್ರಾ.ಪಂ ಮಾಜಿ ಅಧ್ಯಕ್ಷ ರಣಜಿತ್ ಗಾಯಕವಾಡ, ರಾಘುನಾಥ ಮೇತ್ರೆ, ಚಂದ್ರಕಾಂತ ದೆಟ್ನೆ, ರಾಹುಲ ವಗ್ಗೆ, ಗೋವಿಂದ ಹಂದಿಕೇರೆ, ಸಚಿನ್ ಮೇತ್ರೆ, ರವಿ ದೇವನಾಳೆ, ಮಾರುತಿ ಮೇತ್ರೆ, ಲಕ್ಷ್ಮಣ ಮೇತ್ರೆ, ಶಿವಾನಂದ ವಗ್ಗೆ, ಯುವರಾಜ ಖಂಡಾಳೆ, ಸಂಜೀವ ಮೇತ್ರೆ, ದತ್ತು ಮೇತ್ರೆ ಹಾಗೂ ಶರಣಪ್ಪ ಮೇತ್ರೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.