ಔರಾದ್: ತಾಲ್ಲೂಕಿನ ಸಂತಪುರ ಸರ್ಕಾರಿ ಪ್ರೌಢಶಾಲೆ ಕನ್ನಡ ಶಿಕ್ಷಕ ಶಿವಲಿಂಗ ಹೇಡೆ ಪ್ರಸಕ್ತ ಸಾಲಿನ ‘ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
ಪ್ರೌಢಶಾಲಾ ವಿಭಾಗದಿಂದ ರಾಜ್ಯದ ವಿವಿಧ ಶಾಲೆಗಳ 11 ಶಿಕ್ಷಕರ ಪೈಕಿ ಶಿವಲಿಂಗ ಹೇಡೆ ಪ್ರಶಸ್ತಿ ಪಡೆದಿದ್ದು ಗಡಿ ಜಿಲ್ಲೆ ಬೀದರ್ ಶಿಕ್ಷಕ ಸಮುದಾಯದಲ್ಲಿ ಸಂತಸ ಮೂಡಿಸಿದೆ. ಏಳು ವರ್ಷಗಳ ನಂತರ ಜಿಲ್ಲೆಯ ಶಿಕ್ಷಕರೊಬ್ಬರಿಗೆ ಈ ಪ್ರಶಸ್ತಿ ಲಭಿಸಿದೆ.
ಶಿಕ್ಷಕ ಶಿವಲಿಂಗ ಹೇಡೆ ಅವರು ಪ್ರಾಥಮಿಕ, ಪ್ರೌಢ ಹಾಗೂ ಪಿಯುಸಿ ಸಂತಪುರನಲ್ಲೇ ಓದಿ ಈಗ ಅದೇ ಊರಿನ ಸರ್ಕಾರಿ ಪ್ರೌಢ ಶಾಲೆ ಕನ್ನಡ ಶಿಕ್ಷಕರಾಗಿದ್ದು ವಿಶೇಷ. ಶಿಕ್ಷಕ ವೃತ್ತಿ ಜತೆಗೆ ಸಾಹಿತ್ಯದಲ್ಲೂ ಅಭಿರುಚಿ ಹೊಂದಿದ್ದಾರೆ. ಎರಡು ಕವನ ಸಂಕಲನ, ಎರಡು ಸಾಹಿತ್ಯ ಕೃತಿ ಹಾಗೂ ನಾಲ್ಕು ಸಂಪಾದಿಕ ಕೃತಿ ರಚಿಸಿದ್ದಾರೆ. ವಡಗಾಂವ್ ಶಾಲೆಯಲ್ಲಿ ಐದು ವರ್ಷ ಸೇವೆ ಸಲ್ಲಿಸಿದ ಅವರು ಅಲ್ಲಿ ಕನ್ನಡ ಭಾಷಾ ಪ್ರಯೋಗ ಶಾಲೆ ಮಾಡಿ ಜಿಲ್ಲೆಯ ಸಾಹಿತಿಗಳು, ಬರಹಗಾರರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ತಾಲ್ಲೂಕಿನ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿ ಬಂದಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್. ನಾಗನೂರ ಸಂತಸ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.