ADVERTISEMENT

ವಿಶ್ವಕ್ಕೆ ಗುರುಮಂತ್ರ ಬೋಧಿಸಿದ ದೇಶ ಭಾರತ

ಸಂಸ್ಕೃತ ಪ್ರಾಧ್ಯಾಪಕ ಮಿಲಿಂದಾಚಾರ್ಯ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2019, 15:25 IST
Last Updated 5 ಸೆಪ್ಟೆಂಬರ್ 2019, 15:25 IST
ಬೀದರ್‌ನ ಪ್ರತಾಪನಗರದಲ್ಲಿನ ಜನಸೇವಾ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ವಿದ್ಯಾರ್ಥಿಗಳು ಶಿಕ್ಷಕರ ಪಾದ ಪೂಜೆ ಮಾಡಿದರು
ಬೀದರ್‌ನ ಪ್ರತಾಪನಗರದಲ್ಲಿನ ಜನಸೇವಾ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ವಿದ್ಯಾರ್ಥಿಗಳು ಶಿಕ್ಷಕರ ಪಾದ ಪೂಜೆ ಮಾಡಿದರು   

ಬೀದರ್: ‘ವಿಶ್ವಕ್ಕೆ ಗುರುಮಂತ್ರ ಬೋಧಿಸಿದ ದೇಶ ಭಾರತ’ ಎಂದು ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಆಯುರ್ವೇದ ಮಹಾವಿದ್ಯಾಲಯದ ಸಂಸ್ಕೃತ ಪ್ರಾಧ್ಯಾಪಕ ಮಿಲಿಂದಾಚಾರ್ಯ ಹೇಳಿದರು.

ಇಲ್ಲಿನ ಪ್ರತಾಪನಗರದಲ್ಲಿನ ಜನಸೇವಾ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಭಾರತದಲ್ಲಿ ಗುರುವಿಗೆ ಅಗ್ರಸ್ಥಾನವಿದೆ. ರಾಮಕೃಷ್ಣ ಪರಮಹಂಸ–ಸ್ವಾಮಿ ವಿವೇಕಾನಂದ ಹಾಗೂ ಸ್ವಾಮಿ ಸಮರ್ಥ– ರಾಮದಾಸರ ಮಧ್ಯದ ಗುರು ಶಿಷ್ಯ ಪರಂಪರೆ ಇಡೀ ಜಗತ್ತಿಗೆ ಮಾದರಿಯಾಗಿದೆ’ ಎಂದು ಉದಾಹರಣೆ ಸಹಿತ ವಿವರಿಸಿದರು.

‘ಈ ಹಿಂದೆ ರಾಜ, ಮಹಾರಾಜರ ಕಾಲದಲ್ಲಿ ಗುರು ಶಿಷ್ಯರ ಸಂಬಂಧ ಬಹಳ ಎತ್ತರದಲ್ಲಿತ್ತು ಎನ್ನುವುದಕ್ಕೆ ಅನೇಕ ಉದಾಹರಣೆಗಳಿವೆ. ರಾಜರು ಗುರುಗಳನ್ನು ಮಾರ್ಗದರ್ಶನಕ್ಕೆಂದು ತಮ್ಮ ಆಸ್ತಾನದಲ್ಲಿರಿಸಿಕೊಳ್ಳುತ್ತಿದ್ದರು. ಆದರೆ ವಿದ್ಯಾಭ್ಯಾಸದ ಸಮಯದಲ್ಲಿ ಗುರುಗಳಿರುವ ಕಾಡಿನ, ಅವರ ಗುಡಿಸಲಿಗೆ ಹೋಗಿ ವಿದ್ಯೆ ಕಲಿಯುತ್ತಿದ್ದರು. ಇಂಥ ಔದಾರ್ಯಯುಳ್ಳ ಜಗತ್ತಿನ ಚೊಚ್ಚಲ ದೇಶ ನಮ್ಮದಾಗಿದೆ’ ಎಂದು ಬಣ್ಣಿಸಿದರು.

ADVERTISEMENT

‘ಡಾ.ರಾಧಾಕೃಷ್ಣನ್‍ ಅವರು ಒಬ್ಬ ಶ್ರೇಷ್ಠ ತತ್ವಜ್ಞಾನಿಯೂ ಆಗಿದ್ದರು. ಆದರ್ಶ ಗುರುವಾದವನು ಎಂತಹ ತ್ಯಾಗಕ್ಕೂ ಸಿದ್ಧರಾಗಿರುತ್ತಾರೆ ಎತ್ತರೆತ್ತರಕ್ಕೆ ಬೆಳೆದು ನಿಲ್ಲುತ್ತಾರೆನ್ನುವುದಕ್ಕೆ ಅವರೇ ನಮಗೆ ಉತ್ತಮ ನಿದರ್ಶನ’ ಎಂದು
ಹೇಳಿದರು.

ಶಾಲೆಯ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ‘ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಪ್ರಕಾರ ಒಂದು ದೇಶ ಸಮಗ್ರ ವಿಕಾಸ ಹೊಂದುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿರುತ್ತದೆ’ ಎಂದು ತಿಳಿಸಿದರು.

ಇದಕ್ಕೂ ಮೊದಲು ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಪಾದ ಪೂಜೆ ಮಾಡಿ, ಆರತಿ ಬೆಳಗಿ ಗುರು ಆರಾಧನೆ ನೆರವೇರಿಸಿದರು. ನಂತರ ಸಾಮೂಹಿಕವಾಗಿ ಸಂಸ್ಕೃತದ ಶ್ಲೋಕದೊಂದಿಗೆ ಶಿಕ್ಷಕರನ್ನು ಅಭಿನಂದಿಸಲಾಯಿತು.

ಶಾಲೆಯ ಅಧ್ಯಕ್ಷ ಬಸವರಾಜ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ಶಿವರಾಜ ಹುಡೇದ, ಹಿರಿಯ ಸದಸ್ಯ ಬಿ.ಎಸ್ ಕುದುರೆ ಇದ್ದರು. ರಾಣಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.