ಭಾಲ್ಕಿ: ತಾಲ್ಲೂಕಿನ ತಳವಾಡ (ಕೆ)-ಲೆಕ್ಚರ್ ಕಾಲೊನಿ ಬಳಿ ಈಚೆಗೆ ನಡೆದ ರಾಜಕುಮಾರ ಸಿದ್ರಾಮಪ್ಪ ಬಿರಾದಾರ (45) ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೊಮ್ಮಗೊಂಡ ಗೋರಖನಾಥ ಮೇತ್ರೆ (25) ಮತ್ತು ರೂಪಾವತಿ ರಾಜಕುಮಾರ ಬಿರಾದಾರ (40) ಬಂಧಿತ ಆರೋಪಿಗಳು.
‘ರಾಜಕುಮಾರಗೆ ತನ್ನ ಪತ್ನಿ ರೂಪಾವತಿ ಮತ್ತು ಗೋರಖನಾಥ ಮೇತ್ರೆ ನಡುವೆ ಅಕ್ರಮ ಸಂಬಂಧ ಇರುವುದು ಗೊತ್ತಾಗಿತ್ತು. ಇದರಿಂದ ಮನೆಯಲ್ಲಿ ಜಗಳವಾಗಿತ್ತು. ಈ ಕಾರಣಕ್ಕೆ ಏಪ್ರಿಲ್ 28ರ ರಾತ್ರಿ ಇಬ್ಬರೂ ಆರೋಪಿಗಳು ಸೇರಿ ಸಂಚು ರೂಪಿಸಿದರು. ರಾಜಕುಮಾರಗೆ ಕಂಠ ಪೂರ್ತಿ ಮದ್ಯ ಕುಡಿಸಿ, ನಂತರ ಆತನ ತಲೆಗೆ ದೊಡ್ಡ ಕಲ್ಲಿನಿಂದ ಹೊಡೆದು ಕೊಲೆ ಮಾಡಲಾಯಿತು’ ಎಂದು ಪೊಲೀಸರು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಗೋಪಾಲ್ ಎಂ.ಬ್ಯಾಕೋಡ್, ಡಿವೈಎಸ್ಪಿ ದೇವರಾಜ್ ಬಿ. ಮಾರ್ಗದರ್ಶನದಲ್ಲಿ ನಗರ ಪೊಲೀಸ್ ಠಾಣೆಯ ಸಿಪಿಐ ಟಿ.ಅರ್.ರಾಘವೇಂದ್ರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.