ಚಾಮರಾಜನಗರ: ಉತ್ಪಾದನಾ ವೆಚ್ಚ ಹೆಚ್ಚಳ, ಕಾರ್ಮಿಕರ ಕೊರತೆ ಹಾಗೂ ವೈಜ್ಞಾನಿಕ ಬೆಲೆ ಇಲ್ಲದಿರುವ ಪರಿಣಾಮ ಬೆಲ್ಲ ನಂಬಿ ಆಲೆಮನೆ ನಡೆಸುತ್ತಿರುವ ಜಿಲ್ಲೆಯ ಕಬ್ಬು ಬೆಳೆಗಾರರು ದಿಕ್ಕೆಟ್ಟಿದ್ದಾರೆ.
ಮಾರುಕಟ್ಟೆಯಲ್ಲಿನ ಬೆಲೆಯ ಏರಿಳಿತಕ್ಕೆ ಹಲವು ಕಬ್ಬು ಬೆಳೆಗಾರರ ಬದುಕು ಆಲೆಮನೆ ಹೊಗೆಯಲ್ಲಿ ಮಸುಕಾಗಿದೆ. ಕಳೆದ ಮೂರ್ನಾಲ್ಕು ವರ್ಷದಿಂದ ಉತ್ತಮ ಮಳೆ ಸುರಿದಿಲ್ಲ. ಹೀಗಾಗಿ, ನೀರಾವರಿ ಆಶ್ರಿತ ಹಲವು ಬೆಳೆಗಾರರು ಆಲೆಮನೆಯಿಂದ ಹಿಂದೆ ಸರಿದಿದ್ದಾರೆ.
ಒಂದೆಡೆ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದರೂ ವೈಜ್ಞಾನಿಕ ಬೆಲೆ ಸಿಗುವುದಿಲ್ಲ. ಮತ್ತೊಂದೆಡೆ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಅಚ್ಚುಬೆಲ್ಲಕ್ಕೆ ಧಾರಣೆ ಸಿಗುವುದಿಲ್ಲ. ಇದರ ಪರಿಣಾಮ ನಷ್ಟ ಅನುಭವಿಸುವಂತಾಗಿದೆ ಎನ್ನುವುದು ಬೆಳೆಗಾರರ ಅಳಲು.
ದಶಕದ ಹಿಂದೆ ಕೊಳ್ಳೇಗಾಲ, ಚಾಮರಾಜನಗರ, ಯಳಂದೂರು ಭಾಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಆಲೆಮನೆಗಳಿದ್ದವು. ಉತ್ಪಾದನಾ ವೆಚ್ಚ ಹೆಚ್ಚಳ ಹಾಗೂ ಬೆಲೆ ಕುಸಿತದಿಂದ ಬೆಳೆಗಾರರು ಬೇಸತ್ತಿದ್ದಾರೆ. ಇನ್ನೊಂದೆಡೆ ಮಧ್ಯವರ್ತಿಗಳ ಹಾವಳಿ ಕೂಡ ಬೆಳೆಗಾರರು ಆಲೆಮನೆಗಳಿಂದ ಹಿಂದೆ ಸರಿಯಲು ಮೂಲ ಕಾರಣವಾಗಿದೆ.
ಒಂದು ಟನ್ ಕಬ್ಬಿನಲ್ಲಿ ಅಂದಾಜು 120 ಕೆಜಿ ಅಚ್ಚುಬೆಲ್ಲ ಉತ್ಪಾದಿಸಬಹುದು. ಕಬ್ಬು ಗುಣಮಟ್ಟದಿಂದ ಕೂಡಿದ್ದರೆ ಮಾತ್ರ ಇಷ್ಟು ಪ್ರಮಾಣದಲ್ಲಿ ಬೆಲ್ಲ ಲಭಿಸುತ್ತದೆ. ಇಲ್ಲವಾದರೆ ಒಂದು ಟನ್ಗೆ ಸರಾಸರಿ 80ರಿಂದ 90 ಕೆಜಿಯಷ್ಟು ಬೆಲ್ಲ ಸಿಗುತ್ತದೆ. 1 ಟನ್ ಕಬ್ಬಿಗೆ ರೂ 2,500 ಧಾರಣೆಯಿದೆ. ಕಬ್ಬು ಕಟಾವು, ಆಲೆಮನೆಗೆ ಸಾಗಣೆ, ಒಲೆ ಉರಿಸುವುದು, ಅಚ್ಚಿಗೆ ಪಾಕ ಹಾಕುವುದು ಸೇರಿದಂತೆ ಇತರೇ ಕೆಲಸಕ್ಕೆ ಕನಿಷ್ಠ 12 ಮಂದಿ ಕೂಲಿಯಾಳು ಬೇಕಿದೆ.
ಇಷ್ಟು ಸಂಖ್ಯೆಯ ಕೂಲಿಯಾಳುಗಳಿಗೆ ಕನಿಷ್ಠ ರೂ 1,200 ಕೂಲಿ ನೀಡಬೇಕಿದೆ. ಉಳಿದಂತೆ ಯಂತ್ರಚಾಲನೆಗೆ ಡೀಸೆಲ್, ಬೆಲ್ಲದ ಉತ್ಪಾದನೆಗೆ ಬೇಕಿರುವ ಇತರೇ ಪದಾರ್ಥಗಳಿಗೆ ಕನಿಷ್ಠ ರೂ 300 ವೆಚ್ಚವಾಗಲಿದೆ. ಒಂದು ಕ್ವಿಂಟಲ್ ಅಚ್ಚುಬೆಲ್ಲ ಉತ್ಪಾದಿಸಲು ಕನಿಷ್ಠ ರೂ 4 ಸಾವಿರ ಖರ್ಚಾಗುತ್ತದೆ.
ಮಾರುಕಟ್ಟೆಯಲ್ಲಿ 1 ಕ್ವಿಂಟಲ್ ಅಚ್ಚುಬೆಲ್ಲದ ಬೆಲೆ ರೂ 5 ಸಾವಿರ ದಾಟಿದರೆ ಮಾತ್ರವೇ ಬೆಳೆಗಾರರಿಗೆ ಲಾಭ ದಕ್ಕಲಿದೆ. ಇಲ್ಲವಾದರೆ, ನಷ್ಟ ಕಟ್ಟಿಟ್ಟಬುತ್ತಿ.
ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ ಅಚ್ಚುಬೆಲ್ಲಕ್ಕೆ 3,000 ರೂನಿಂದ 3,600 ರೂಪಾಯಿವರೆಗೆ ಧಾರಣೆಯಿದೆ.
ಹೀಗಾಗಿ, ಆಲೆಮನೆ ಹೊಂದಿರುವ ರೈತರು ನಷ್ಟ ಅನುಭವಿಸುವಂತಾಗಿದೆ. ಕಳೆದ ಎರಡು ವರ್ಷದಿಂದ ಸಮರ್ಪಕವಾಗಿ ಮಳೆ ಸುರಿದಿಲ್ಲ. ನೀರಿನ ಅಭಾವದಿಂದ ಗುಣಮಟ್ಟದ ಕಬ್ಬು ಕೂಡ ಲಭಿಸುತ್ತಿಲ್ಲ. ಹೀಗಾಗಿ, ಒಂದು ಟನ್ ಕಬ್ಬಿನಲ್ಲಿ ರೈತರು ನಿರೀಕ್ಷಿಸುವಷ್ಟು ಬೆಲ್ಲದ ಉತ್ಪಾದನೆಯಾಗುತ್ತಿಲ್ಲ. ಆದರೆ, ಉತ್ಪಾದನಾ ವೆಚ್ಚ ಮಾತ್ರ ಏರುತ್ತಿದೆ. ಇದು ಆಲೆಮನೆಗಳಿಂದ ರೈತರು ವಿಮುಖರಾಗಲು ಕಾರಣವಾಗಿದೆ.
ಕಳೆದ ಎರಡು ವರ್ಷದಿಂದ ನಷ್ಟ ಸರಿದೂಗಿಸಿಕೊಳ್ಳುವಲ್ಲಿ ಸೋತಿರುವ ಹಲವು ರೈತರು ಆಲೆಮನೆಯಿಂದ ದೂರ ಸರಿದಿದ್ದಾರೆ. ಆದರೆ, ಬೆಲ್ಲಕ್ಕೆ ಸ್ಥಿರ ಧಾರಣೆ ರೂಪಿಸುವಲ್ಲಿ ರಾಜ್ಯ ಸರ್ಕಾರ, ಜನಪ್ರತಿನಿಧಿಗಳು ಮುಂದಾಗಿಲ್ಲ ಎನ್ನುವುದು ಕಬ್ಬು ಬೆಳೆಗಾರರ ದೂರು.
ದಲ್ಲಾಳಿಗಳಿಗೆ ಲಾಭ:
ಸಾಕಷ್ಟು ರೈತರು ಹಣಕ್ಕಾಗಿ ದಲ್ಲಾಳಿಗಳನ್ನೇ ಅವಲಂಬಿಸಿದ್ದಾರೆ. ಆಲೆಮನೆ ಆರಂಭಿಸುವುದರಿಂದ ಹಿಡಿದು ಮಾರುಕಟ್ಟೆಗೆ ಬೆಲ್ಲ ಪೂರೈಕೆ ಮಾಡುವವರೆಗೂ ದಲ್ಲಾಳಿಗಳಿಂದ ಮುಂಗಡ ಹಣ ಪಡೆಯುವುದು ಸಾಮಾನ್ಯ. ಹಣ ನೀಡುವ ದಲ್ಲಾಳಿಗಳು ಕ್ವಿಂಟಲ್ಗೆ ಇಂತಿಷ್ಟು ಕಮಿಶನ್ ಪಡೆಯುತ್ತಾರೆ.
ಜತೆಗೆ, ದಲ್ಲಾಳಿಗಳು ಖರೀದಿದಾರರಿಂದ ಹಣ ಪಡೆದು ರೈತರಿಗೆ ನೀಡುತ್ತಾರೆ. ಖರೀದಿದಾರರಿಗೆ ಬೆಲ್ಲ ನೀಡುವುದರಿಂದ ಅವರಿಂದಲೂ ಕಮಿಶನ್ ರೂಪದಲ್ಲಿ ಹಣ ಸಿಗುತ್ತದೆ. ವರ್ಷವೆಲ್ಲ ಬದುಕು ಸವೆಸಿದ ರೈತರಿಗೆ ಮಾತ್ರ ಲಾಭ ಗಿಟ್ಟುವುದಿಲ್ಲ.
ಜಿಲ್ಲೆಯಲ್ಲಿ ಕೆಲವು ಕಬ್ಬು ಬೆಳೆಗಾರರು ಸ್ವಂತ ಆಲೆಮನೆ ಹೊಂದಿಲ್ಲ. ಅಂತಹವರು ಆಲೆಮನೆ ಹೊಂದಿರುವ ರೈತರಿಗೆ ಕಬ್ಬು ಪೂರೈಸಿ ಅಚ್ಚುಬೆಲ್ಲ ತಯಾರಿಸುತ್ತಾರೆ. ಆಲೆಮನೆಯ ಮಾಲೀಕರಿಗೆ ಇಂತಿಷ್ಟು ಬಾಡಿಗೆ ಹಣ ನೀಡುತ್ತಾರೆ.
ಮತ್ತೆ ಕೆಲವು ಆಲೆಮನೆ ಹೊಂದಿರುವ ರೈತರು ಕಬ್ಬು ಬೆಳೆಯುವುದಿಲ್ಲ. ಅಂತಹವರು ರೈತರಿಂದ ನೇರವಾಗಿ ಕಬ್ಬು ಖರೀದಿಸಿ ಬೆಲ್ಲ ತಯಾರಿಸುತ್ತಾರೆ. ಆದರೆ, ಆಲೆಮನೆ ಮಾಲೀಕರು, ರೈತರಿಗೂ ಲಾಭ ಮಾತ್ರ ಗಿಟ್ಟುತ್ತಿಲ್ಲ.
ಹಂದಿ ಹಾವಳಿ ಉಲ್ಬಣ
ನೀರಾವರಿ ಪ್ರದೇಶದ ರೈತರು ಸಾಲ ಮಾಡಿ ಕಬ್ಬು ಬೆಳೆಯುತ್ತಾರೆ. ಆದರೆ, ಕಾಡುಹಂದಿಗಳ ಹಾವಳಿಗೆ ತೊಂದರೆ ಅನುಭವಿಸುವಂತಾಗಿದೆ. ಕಾಡಂಚಿನ ಪ್ರದೇಶದ ಕಬ್ಬು ಬೆಳೆಗಾರರು ಕಾಡಾನೆಗಳ ಹಾವಳಿಗೂ ತತ್ತರಿಸುವಂತಾಗಿದೆ. ಕಾಡುಪ್ರಾಣಿಗಳ ಹಾವಳಿಯಿಂದ ಬೆಳೆ ನಷ್ಟವಾದರೆ ಸೂಕ್ತ ಪರಿಹಾರವೂ ಸಿಗುವುದಿಲ್ಲ ಎನ್ನುವುದು ರೈತರ ಗೋಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.