ADVERTISEMENT

ಕ್ಷಯರೋಗ ಪ್ರಕರಣ: ವರದಿ ಸಲ್ಲಿಕೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 8:26 IST
Last Updated 20 ಡಿಸೆಂಬರ್ 2012, 8:26 IST

ಚಾಮರಾಜನಗರ: ಜಿಲ್ಲೆಯಲ್ಲಿ ಕ್ಷಯರೋಗ ಪ್ರಕರಣ ಗುರುತಿಸಿ ಚಿಕಿತ್ಸೆ ನೀಡುವ ಎಲ್ಲ ವೈದ್ಯರು ಕ್ಷಯರೋಗಿಗಳ ಮಾಹಿತಿಯನ್ನು ಜಿಲ್ಲೆ, ನಗರ, ಸ್ಥಳೀಯ ಸಂಸ್ಥೆಗಳ ಆರೋಗ್ಯಾಧಿಕಾರಿಗಳಿಗೆ ಕಡ್ಡಾಯವಾಗಿ ವರದಿ ಮಾಡಬೇಕು ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಸೂಚಿಸಿದ್ದಾರೆ.

ದೇಶದಲ್ಲಲಿ ಕ್ಷಯರೋಗವು ಹೆಚ್ಚು ಸಾವಿಗೆ ಕಾರಣವಾಗಿರುವ ಕಾಯಿಲೆಗಳಲ್ಲಿ ಒಂದಾಗಿದೆ. ಶೀಘ್ರವೇ ಈ ರೋಗ ಗುರುತಿಸಿ ಸಂಪೂರ್ಣವಾಗಿ ಗುಣಪಡಿಸುವುದು ಆದ್ಯತೆ ವಿಷಯವಾಗಿದೆ. ಅಸಮರ್ಪಕ ಗುರುತಿಸುವಿಕೆ ಹಾಗೂ ಸೂಕ್ತ ಚಿಕಿತ್ಸೆ ಪಡೆಯದೆ ಇರುವುದರಿಂದ ರೋಗವು ಬಹುಔಷಧಿ ಪ್ರತಿರೋಧ ಕ್ಷಯರೋಗವಾಗಿ ಪರಿವರ್ತಿತಗೊಂಡು ಜೀವಕ್ಕೆ ಮಾರಕವಾಗುವ ಸಾಧ್ಯತೆ ಇದೆ.

ಈ ಹಿನ್ನೆಲೆಯಲ್ಲಿ ಕ್ಷಯರೋಗದ ಪ್ರಕರಣಗಳ ಗುರುತಿಸುವಿಕೆ, ಚಿಕಿತ್ಸೆ, ರೋಗ ಹರಡುವಿಕೆ ನಿಯಂತ್ರಣ ಹಾಗೂ ಪ್ರತಿರೋಧ ಕ್ಷಯರೋಗ ತಡೆಯಲು ಎಲ್ಲ ಕ್ಷಯರೋಗಿಗಳ ಮಾಹಿತಿ ಪಡೆಯುವುದು ಆವಶ್ಯಕವಾಗಿದೆ.

ಎಲ್ಲ ಸರ್ಕಾರಿ ಆಸ್ಪತ್ರೆ, ಸ್ಥಳೀಯ ಸೇವಾ ಸಂಸ್ಥೆ, ಖಾಸಗಿ ವೈದ್ಯರು, ಸ್ವಯಂಸೇವಾ ಸಂಸ್ಥೆಗಳ ಆಸ್ಪತ್ರೆ ವೈದ್ಯರು ಕಡ್ಡಾಯವಾಗಿ ನಿಗದಿತ ನಮೂನೆಯಲ್ಲಿ ಪ್ರತಿ ತಿಂಗಳು ಕ್ಷಯರೋಗ ಪ್ರಕರಣಗಳ ವರದಿ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.

ಕ್ಷಯರೋಗಿಯ ಮಾಹಿತಿ ನೀಡದಿರುವುದು, ತಪ್ಪು ಮಾಹಿತಿ ನೀಡುವುದು ಹಾಗೂ ಕ್ಷಯರೋಗ ಕುರಿತು ರಾಷ್ಟ್ರೀಯ ಮಾರ್ಗಸೂಚಿ ಪಾಲಿಸದೆ ಇರುವುದು ಕಂಡುಬಂದರೆ ಭಾರತೀಯ ವೈದ್ಯಕೀಯ ಪರಿಷತ್ ಕಾನೂನು ಹಾಗೂ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆ ಕಾಯ್ದೆ ಅನ್ವಯ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ

ಚಾಮರಾಜನಗರ: ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಡಿ. 20ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ.ಅಂದು ಬೆಳಿಗ್ಗೆ 10.30ಗಂಟೆಗೆ ಸಚಿವರು ನಗರಕ್ಕೆ ಆಗಮಿಸುವರು. ಬಳಿಕ ಜಿಲ್ಲಾ ಪಂಚಾಯಿತಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಂಜೆ 5ಗಂಟೆಗೆ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT