ADVERTISEMENT

ನಗರಸಭೆ: ರೂ 1.20 ಕೋಟಿ ತೆರಿಗೆ ಬಾಕಿ!

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 8:58 IST
Last Updated 19 ಡಿಸೆಂಬರ್ 2012, 8:58 IST

ಚಾಮರಾಜನಗರ: `ನಗರಸಭೆಗೆ ಸಕಾಲದಲ್ಲಿ ತೆರಿಗೆ ಪಾವತಿಯಾಗುತ್ತಿಲ್ಲ. ಒಟ್ಟು 1.20 ಕೋಟಿ ತೆರಿಗೆ ಹಣ ವಸೂಲಾತಿಯಾಗಿಲ್ಲ' ಎಂದು ಪೌರಾಯುಕ್ತ ವಿ.ಎಚ್. ಕೃಷ್ಣಮೂರ್ತಿ ಹೇಳಿದರು.

ನಗರದ ರಾಮಸಮುದ್ರ ಹೌಸಿಂಗ್‌ಬೋರ್ಡ್ ಕಾಲೊನಿಯಲ್ಲಿ ಸೋಮ ವಾರ ನಡೆದ ಗಿಡ ನೆಡುವ ಕಾರ್ಯ ಕ್ರಮ ಹಾಗೂ ಸಾಂಸ್ಕೃತಿಕ ಸೌರಭ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ನಗರದ ವ್ಯಾಪ್ತಿ 26 ಉದ್ಯಾನ ಗುರುತಿಸಲಾಗಿದೆ. ಈ ಪೈಕಿ ದೊಡ್ಡಅರಸನಕೊಳ, ಹೌಸಿಂಗ್‌ಬೋರ್ಡ್ ಕಾಲೊನಿ, ಪುಟ್ಟಮ್ಮಣಿ ಉದ್ಯಾನದ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದ ಅವರು, ನಗರಸಭೆಯಲ್ಲಿ ಅನುದಾನದ ಕೊರತೆಯಿದೆ. ವಾರ್ಷಿಕವಾಗಿ 20 ಲಕ್ಷ ರೂ ತೆರಿಗೆ ಮಾತ್ರ ವಸೂಲಿಯಾಗುತ್ತಿದೆ. ಹೀಗಾಗಿ, ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

`ಜಿಲ್ಲಾ ಕೇಂದ್ರದಲ್ಲಿ ಕೋಟ್ಯಂತರ ರೂ ವೆಚ್ಚದಡಿ ಉದ್ಯಾನಗಳನ್ನು ಅಭಿವೃದ್ಧಿಪಡಿಸಿದ್ದರೂ ನಿರ್ವಹಣೆ ಯಿಲ್ಲದೆ ಸೊರಗುತ್ತಿವೆ' ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ವಿಷಾದಿಸಿದರು.
                                                                                                                                                                          
ಸಂತೇಮರಹಳ್ಳಿ ವೃತ್ತದ ಬಳಿಯ ಪುಟ್ಟಮಣ್ಣಿ ಉದ್ಯಾನದ ಅಭಿವೃದ್ಧಿಗೆ ಎರಡು ಬಾರಿ ಅನುದಾನ ನೀಡಲಾ ಗಿದೆ. ಆದರೆ, ನಿರ್ವಹಣೆ ಕೊರತೆ ಎದುರಾಗಿದೆ. ನಗರಸಭೆ ಆಡಳಿತ ಉದ್ಯಾನಗಳನ್ನು ನಿರ್ವಹಣೆ ಮಾಡಲು ನಿರ್ಲಕ್ಷ್ಯವಹಿಸಿದೆ ಎಂದು ದೂರಿದರು.

ಗಿಡ ನೆಡುವುದರಿಂದ ಉತ್ತಮ ಪರಿಸರ ನಿರ್ಮಿಸಬಹುದು. ಇದರಿಂದ ಆರೋಗ್ಯಕರ ಜೀವನ ನಡೆಸಲು ಸಾಧ್ಯ ಎಂದ ಅವರು, ಸಾಮಾಜಿಕ ಅರಣ್ಯ ಇಲಾಖೆಯಿಂದ ನಾಗರಿಕರಿಗೆ ಗಿಡ ನೀಡಲಾಗುತ್ತಿದೆ. ಬಡಾವಣೆಯ ನಿವಾಸಿಗಳು ಇದರ ಪ್ರಯೋಜನ ಪಡೆದುಕೊಂಡು ಮನೆಗಳ ಮುಂದೆ ಗಿಡನೆಟ್ಟು ಬೆಳೆಸಬೇಕು ಎಂದು ಸಲಹೆ ನೀಡಿದರು.

ರಾಮಸಮುದ್ರ ಹೌಸಿಂಗ್‌ಬೋರ್ಡ್ ಕಾಲೊನಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪ್ರಕಾಶ್‌ಬೆಲ್ಲದ್ ಅಧ್ಯಕ್ಷತೆವಹಿಸಿದ್ದರು. ನಗರಸಭೆ ಸದಸ್ಯ ಮಹಮದ್ ಅಸ್ಗರ್, ವಿ. ಶ್ರೀನಿವಾಸಪ್ರಸಾದ್, ಆಲೂರುಮಲ್ಲು, ಕುನ್ನೇಗೌಡ, ಸಿ.ಎಂ. ನರಸಿಂಹಮೂರ್ತಿ, ಮಹದೇವಸ್ವಾಮಿ ಹಾಜರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದಆಯೋಜಿಸಲಾಗಿದ್ದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮದಲ್ಲಿ ಗಾಯಕರಾದ ಮಂಜು ಮತ್ತು ತಂಡದಿಂದ ಸುಗಮ ಸಂಗೀತ ಗಾಯನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.