ADVERTISEMENT

ಪಂಚಾಯಿತಿ ಕಚೇರಿಗೆ ಗ್ರಾಮಸ್ಥರ ಮುತ್ತಿಗೆ

ಪಡಿತರ ಚೀಟಿ ನವೀಕರಣಕ್ಕೆ ಹೆಚ್ಚಿನ ಹಣ ವಸೂಲಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2013, 8:46 IST
Last Updated 13 ಜುಲೈ 2013, 8:46 IST

ಕೊಳ್ಳೇಗಾಲ: ಗ್ರಾಮಸಭೆ ಆರಂಭವಾದ ಕೆಲಹೊತ್ತಿನಲ್ಲೇ ಸಾರ್ವಜನಿಕರಿಂದ ಗ್ರಾಮದ ಮೂಲಸೌಲಭ್ಯಗಳ ಬಗೆಗಿನ ಪ್ರಶ್ನೆಗಳ ಸುರಿಮಳೆಗೆ ತತ್ತರಿಸಿದ  ಅಭಿವೃದ್ಧಿ ಅಧಿಕಾರಿ ಸಭೆಯಿಂದಲೇ ಹೊರನಡೆದ ಘಟನೆ ಶುಕ್ರವಾರ ತಾಲ್ಲೂಕಿನ ಕಣ್ಣೂರು ಗ್ರಾಮದಲ್ಲಿ ನಡೆಯಿತು.

2013-14ನೇ ಸಾಲಿನ ನರೇಗ ಹೆಚ್ಚುವರಿ ಕ್ರಿಯಾಯೋಜನೆ ತಯಾರಿಸಲು ಶುಕ್ರವಾರ ಗ್ರಾಮಸಭೆ ಕರೆಯಲಾಗಿತ್ತು. ಸಹಾಯಕ ಕೃಷಿ ಅಧಿಕಾರಿ ಮುನಿಸ್ವಾಮಿ ಕೃಷಿ ಇಲಾಖೆ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ರೈತರಿಗೆ ಸುವರ್ಣಭೂಮಿ ಯೋಜನೆಯಡಿ ಪರಿಹಾರ ಹಣ ಸಿಗುತ್ತಿಲ್ಲ ಹಾಗೂ ಸಭೆಗೆ ಬಹುತೇಕ ಸದಸ್ಯರು ಗೈರು ಹಾಜರಾಗಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಪಡಿತರ ಚೀಟಿ ನವೀಕರಣಕ್ಕೆ ವಸೂಲಿ ಮಾಡುತ್ತಿರುವ ಹೆಚ್ಚಿನ ಹಣಕ್ಕೆ ಕಡಿವಾಣ ಹಾಕಿ ಇಲಾಖೆ ನಿಗದಿಪಡಿಸಿರುವ 50 ರೂಪಾಯಿಯನ್ನು ಮಾತ್ರ ಪಡೆಯಬೇಕು ಎಂದು ಒತ್ತಾಯಿಸಿದರು. ಜನರ ಪ್ರಶ್ನೆಗಳಿಗೆ ಉತ್ತರಿಸದ ಪಿಡಿಒ ಹೊಂಗಯ್ಯ ಗ್ರಾಮಸಭೆಯಿಂದ ಹೊರನಡೆದರು.

ಇದರಿಂದ ಕುಪಿತರಾದ ಗ್ರಾಮಸ್ಥರು ಗ್ರಾಮದ ಜನತೆಯ ಸಮಸ್ಯೆಗಳಿಗೆ ಸ್ಪಂದಿಸದ ಗ್ರಾಮ ಪಂಚಾಯಿತಿ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿದರು. ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಗಳ ಪರಿಹಾರಕ್ಕೆ ತಕ್ಷಣ ಮುಂದಾಗದಿದ್ದರೆ ಹೋರಾಟವನ್ನು ತೀವ್ರಗೊಳಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.